newsics.com
ನವದೆಹಲಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟೆಯಲ್ಲಿ ಇತ್ತೀಚೆಗೆ ನಡೆದ ಗೃಹಿಣಿ ವೆಂಕಟಮಾಧವಿಯ ಭೀಕರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಲವು ಆಘಾತಕಾರಿ ಸಂಗತಿಗಳು ಸಿಕ್ಕಿವೆ.
ಜನವರಿ 15 ರಂದು ವೆಂಕಟೇಶ್ವರನಗರ ಕಾಲೋನಿಯಲ್ಲಿ ಪತ್ನಿ ವೆಂಕಟಮಾಧವಿಯನ್ನು ಕೊಲೆ ಮಾಡಿದ ಪತಿ ಗುರುಮೂರ್ತಿ, ಯಾವ ಸಾಕ್ಷಿಗಳು ಸಿಗಬಾರದು ಎಂಬ ಕಾರಣದಿಂದ ಪತ್ನಿಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ಹಾಕಿ ಕುದಿಸಿ, ಬಳಿಕ ಬೇಯಿಸಿದ ದೇಹದ ಭಾಗಗಳನ್ನು ಪಕ್ಕದ ಕೆರೆಯಲ್ಲಿ ಬಿಸಾಕಿ ಬಂದಿದ್ದ. ಕಬ್ಬಿಣದ ರಾಡ್ ಸಹಾಯದಿಂದ ಮೃತದೇಹದ ಮೂಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ್ದು, ಕೃತ್ಯಕ್ಕೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆ ಬಳಿಕ ಆರೋಪಿ ತನ್ನ ಮೇಲೆ ಅನುಮಾನ ಬರಬಾರದೆಂದು ತನ್ನ ಪೋಷಕರೊಂದಿಗೆ ತೆರಳಿ ಮೀರ್ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಆರೋಪಿ ಪತಿ ಗುರುಮೂರ್ತಿ ತನ್ನ ವಿವಾಹೇತರ ಸಂಬಂಧದ ಸಲುವಾಗಿಯೇ ಪತ್ನಿ ವೆಂಕಟಮಾಧವಿಯನ್ನು ಭೀಕರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪತಿಯ ವಿವಾಹೇತರ ಸಂಬಂಧವೇ ಈ ಕೊಲೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಅನ್ನೋದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.