newsics.com
ಬೆಂಗಳೂರು : ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 2025ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತೆರೆಮರೆಯ ಸಾಧಕರಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧನೆ ಮಾಡಿದ ಹೀರೋಗಳಿಗೆ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಪ್ರಕಟವಾಗಲಿದ್ದು, ಮೊದಲ ಹಂತವಾಗಿ ಪದ್ಮಶ್ರೀ ಪ್ರಶಸ್ತಿ ಪಡೆದವರ ಲಿಸ್ಟ್ ಬಹಿರಂಗವಾಗಿದೆ.
ಗೊಂದಲಿ ಜಾನಪದ ಕಲೆಯಲ್ಲಿ ಪ್ರಸಿದ್ಧ ಹೆಸರಾಗಿರುವ ಕರ್ನಾಟಕದ ಬಾಗಲೋಕಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಪದ್ಮಶ್ರೀ ಗೌರವ ಲಭಿಸಿದೆ. ಅದರೊಂದಿಗೆ ಕೊಪ್ಪಳದ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತ ಹಾಗೂ ಔಷಧ ವಿಭಾಗದಲ್ಲಿ ಕಲಬುರಗಿಯ ವಿಜಯಲಕ್ಷ್ಮೀ ದೇಶಮಾನೆ ಕೂಡ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ
ತೊಗಲುಗೊಂಬೆಯಾಟದ ಭೀಮವ್ವ ಶಿಳ್ಳೇಕ್ಯಾತ ಮೂಲತಃ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ನಿವಾಸಿ. 96 ವರ್ಷ ವಯಸ್ಸಿನ ಭೀಮವ್ವ ಅವರು, ದೇಶ, ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಮಹಾನ್ ಕಲಾವಿದೆ.
ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್, 71 ವರ್ಷಗಳ ಕಾಲ ಗೊಂದಳಿ ಹಾಡಿನ ಮೂಲಕ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಗೊಂದಳಿ ಕಲಾಸೇವೆ ಮೂಲಕ ಈಗಾಗಲೇ ವೆಂಕಪ್ಪ ಅಂಬಾಜಿ ಸುಗಟೇಕರ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಡಾ.ವಿಜಯಲಕ್ಷ್ಮೀ ದೇಶಮಾನೆ
ಕಲಬುರಗಿ ಮೂಲದವರಾಗಿರುವ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು, ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ ಎಂದೇ ಹೆಸರುವಾಸಿಯಾಗಿದ್ದಾರೆ.
ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಇತರರು..
ನರೇನ್ ಗುರುಂಗ್ (ಜಾನಪದ ಗಾಯಕ) – ನೇಪಾಳ
ಹರಿಮನ್ ಶರ್ಮಾ (ಸೇಬು ಬೆಳೆಗಾರ) – ಹಿಮಾಚಲ ಪ್ರದೇಶ
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಸಾಮಾಜಿಕ ಕಾರ್ಯಕರ್ತ) – ಅರುಣಾಚಲ ಪ್ರದೇಶ
ವಿಲಾಸ್ ಡಾಂಗ್ರೆ (ಹೋಮಿಯೋಪತಿ ವೈದ್ಯ) – ಮಹಾರಾಷ್ಟ್ರ
ಜೋನಾಸ್ ಮಾಸೆಟ್ಟಿ (ವೇದಾಂತ ಗುರು) ಬ್ರೆಜಿಲ್
ಹರ್ವಿಂದರ್ ಸಿಂಗ್ (ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ) ಹರಿಯಾಣ
ಭೀಮ್ ಸಿಂಗ್ ಭಾವೇಶ್ (ಸಮಾಜ ಕೆಲಸ) ಬಿಹಾರ
ಪಿ.ದಕ್ಷಿಣ ಮೂರ್ತಿ (ಡೋಲು ಕಲಾವಿದ) ಪುದುಚೇರಿ
ಎಲ್. ಹ್ಯಾಂಗ್ಥಿಂಗ್ (ಕೃಷಿ-ಹಣ್ಣುಗಳು) ನಾಗಾಲ್ಯಾಂಡ್
ಬೇರು ಸಿಂಗ್ ಚೌಹಾಣ್ (ಜಾನಪದ ಗಾಯಕ) – ಮಧ್ಯಪ್ರದೇಶ
ಶೇಖಾ ಎ.ಜೆ. ಅಲ್ ಸಬಾಹ್ (ಯೋಗ) – ಕುವೈತ್