newsics.com
ವಿಜಯನಗರ: ಬಾಣಂತಿಯರ ಸಾಲು, ಸಾಲು ದುರಂತ ಮಾಸುವ ಮುನ್ನವೇ ಹೊಸಪೇಟೆಯಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. ಹೌದು, ಸಂಡೂರು ಮೂಲದ ಮಹಿಳೆ ಹೆರಿಗೆಯಾಗಿ 6 ದಿನದ ಬಳಿಕ ಪುಟ್ಟ ಕಂದಮ್ಮನ ಬಿಟ್ಟು ಅಗಲಿದ್ದಾರೆ.
20 ವರ್ಷದ ಐಶ್ವರ್ಯಾಗೆ ಕಳೆದ ಡಿಸೆಂಬರ್ 20ರಂದು ಹೊಸಪೇಟೆಯ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಾಣಂತಿ ಐಶ್ವರ್ಯಾ ಅವರ ದುರಂತಕ್ಕೆ ಫುಡ್ ಪಾಯ್ಸನ್ ಕಾರಣ ಎನ್ನಲಾಗಿದೆ. ಹೆರಿಗೆಯಾದ ಎರಡು ದಿನಗಳ ಬಳಿಕ ಮೃತ ಬಾಣಂತಿ ಇಡ್ಲಿ ತಿಂದಿದ್ದರಂತೆ. ಇಡ್ಲಿ ತಿಂದ ಮೇಲೆ ಐಶ್ವರ್ಯಾ ಅವರು ವಾಂತಿ ಬೇಧಿಯಿಂದ ಬಳಲಿದ್ದಾರೆ. ಐಶ್ವರ್ಯಾ ಸಾವಿಗೆ ಹೊರಗಿನಿಂದ ತಂದ ಇಡ್ಲಿ ತಿಂದಿದ್ದೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಮಾತನಾಡಿದ ವಿಜಯನಗರ ಡಿಎಚ್ಓ ಡಾ. ಶಂಕರ್ ನಾಯಕ್, ಆಸ್ಪತ್ರೆಯಲ್ಲಿ ಯಾರಿಗೂ ಈ ಸಮಸ್ಯೆ ಕಾಣಿಸಿಲ್ಲ. ಬಾಣಂತಿಗೆ ಎಲ್ಲಿಂದ ಇಡ್ಲಿ ತಂದು ತಿನ್ನಿಸಿದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.