newsics.com
ಬೆಂಗಳೂರು: ಬಾಡಿಗೆ ಕೊಟ್ಟಿದ್ದ ಮನೆಯನ್ನೇ ಖಾಲಿ ಇದೆ ಎಂದು ಹೇಳಿ ಲೀಸ್ ಗೆ ಕೊಡುವುದಾಗಿ ನಂಬಿಸಿ 12 ಜನರಿಂದ ₹1.09 ಕೋಟಿ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೋಳನಗರದ ಗಿರೀಶ್ ಬಂಧಿತನಾಗಿದ್ದು, ಆತನಿಂದ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ವಂಚನೆ ಬಗ್ಗೆ ಖಾಸಗಿ ಕಂಪನಿ ಉದ್ಯೋಗಿಗಳಾದ ಮಹೇಂದ್ರ, ರಮ್ಯಾ ಹಾಗೂ ಕೀರ್ತಿ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ .
ಕಳೆದ ನವೆಂಬರ್ನಲ್ಲಿ ಮನೆ ಲೀಸ್ ಗೆ ನೀಡುವ ನೆಪದಲ್ಲಿ ವಂಚಿಸಿರುವ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್ಗಳು ದಾಖಲಾಗಿದ್ದವು. ನೋ ಬ್ರೋಕರ್ ಆ್ಯಪ್ನಲ್ಲಿ ತಮ್ಮ ಮನೆ ಭೋಗ್ಯಕ್ಕಿಡಲಾಗಿದೆ ಎಂದು ವಿವರವನ್ನು ಆರೋಪಿ ಪ್ರಕಟಿಸಿದ್ದ. ಈ ವಿವರ ನೋಡಿ ತನ್ನನ್ನು ಸಂಪರ್ಕಿ ಸುವ ಜನರಿಗೆ ಮನೆ ಖಾಲಿ ಇದೆ ಎಂದು ನಂಬಿಸಿ ಆರೋಪಿ ಹಣ ಪಡೆದಿದ್ದ ಎನ್ನಲಾಗಿದೆ.
ಏನಿದು ಬಾಡಿಗೆ ದಂಧೆ?
• ಬಾಡಿಗೆ ಕೊಟ್ಟ ಮನೆಯನ್ನೇ ಖಾಲಿ ಇದೆ ಎಂದೇಳಿ ಜನರಿಂದ ಸುಲಿಗೆ
• ನೋ ಟ್ರೋಕರ್ ಆ್ಯಪ್ನಲ್ಲಿ ಮನೆ ಮಾಹಿತಿ ನೀಡಿ ಹಣ ಪಡೆಯುತ್ತಿದ್ದ
• 2 ಅಂತಸ್ತಿನ ಮನೆಯಲ್ಲಿ ಒಂದು ಅಂತಸ್ತಿನ ಮನೆ ಬಾಡಿಗೆ ನೀಡಿ ಮೋಸ
• ಪ್ರತಿಯೊಬ್ಬರಿಗೂ ಒಂದೊಂದು ಕಾರಣ ಹೇಳಿ ಹಣ ವಂಚನೆ
• ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲು
ಕಳೆದೊಂದು ವರ್ಷದ ಅವಧಿಯಲ್ಲಿ ಮನೆ ಭೋಗ್ಯದ ಹೆಸರಿನಲ್ಲಿ ಸುಮಾರು 12 ಜನರಿಂದ 1.09 ಕೋಟಿ ಹಣವನ್ನು ಗಿರೀಶ್ ವಸೂಲಿ ಮಾಡಿದ್ದ. ಈ ಹಣದ ಪೈಕಿ 55 ಲಕ್ಷ ರು. ಹಣವನ್ನು ಆತ ಮರಳಿಸಿದ್ದು, ಉಳಿದ 54 ಲಕ್ಷ ರುಪಾಯಿ ಇನ್ನೂ ಬಾಕಿ ಇದೆ. ಒಬ್ಬೊಬ್ಬರಿಂದ 8 ರಿಂದ 10 ಲಕ್ಷವರೆಗೆ ಆತ ವಸೂಲಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.