newsics.com
ದೇಶ ಕಂಡ ಶ್ರೇಷ್ಠ ರಾಜಕಾರಣಿಯಾಗಿದ್ದ ಎಸ್.ಎಂ. ಕೃಷ್ಣ ಅವರ ರಾಜಕೀಯ ಜೀವನ ಹಾಗೂ ವೈಯಕ್ತಿಕ ಬದುಕು ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು.
ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ತಮ್ನನ್ನು ಉಳಿಸಿಕೊಳ್ಳುವುದಕ್ಕಾಗಿ ಅನಪೇಕ್ಷಿತ ಔಷಧಗಳ ಪ್ರಯೋಗ ಮಾಡಬೇಡಿ ಎಂದು ಕುಟುಂಬ ಸದಸ್ಯರಿಗೆ ಮನವಿ ಮಾಡಿದ್ದನ್ನು ಕೃಷ್ಣ ಆಪ್ತರು ಸ್ಮರಿಸಿದ್ದಾರೆ.
‘ಆಧುನಿಕ ಕೆಂಪೇಗೌಡ’ ಎಂದೇ ಖ್ಯಾತಿ ಪಡೆದಿದ್ದ ಎಸ್.ಎಂ.ಕೃಷ್ಣ ಅವರು ಚಿಂತನಶೀಲ ನಾಯಕರಾಗಿದ್ದರು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.
ತಮ್ಮ ಪತ್ನಿ ಪ್ರೇಮಾ ಮತ್ತು ಕುಟುಂಬ ಸದಸ್ಯರ ಜತೆ, ತಮ್ಮನ್ನು ಜೀವಂತವಾಗಿಡಲು ನೀಡುವ ನೋವು ಭರಿತ ವೈದ್ಯಕೀಯ ಉಪಚಾರ ಬೇಕಾಗಿಲ್ಲ ಎಂಬುದನ್ನು ನೇರವಾಗಿಯೇ ಹೇಳಿದ್ದರು. ಸದಾ ಉಲ್ಲಾಸಭರಿತ ಮತ್ತು ಆಶಾವಾದಿಯಾಗಿದ್ದ ಕೃಷ್ಣ, ತಮ್ಮ ಅಂತಿಮ ದಿನಗಳು ಶಾಂತಿಯುತ ಮತ್ತು ಸ್ವಾಭಾವಿಕವಾಗಿರಬೇಕು ಎಂದು ಬಯಸಿದ್ದರು. ತಮ್ಮ ಆಯಸ್ಸು ಹೆಚ್ಚಿಸಲು ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಬಾರದು ಎಂದು ಅವರು ಬಯಸಿದ್ದರು.
ಕಷ್ಟದ ಸಮಯದಲ್ಲಿಯೂ, ಅವರು ತಮ್ಮ ಬುದ್ಧಿವಂತಿಕೆ ಮತ್ತು ಸ್ಪಷ್ಟತೆ ತೋರಿದ್ದರು. ಕಾಲನ ಕರೆಗೆ ವ್ಯತಿರಿಕ್ತವಾಗಿ ಜೀವನವನ್ನು ಅಸ್ವಾಭಾವಿಕವಾಗಿ ಮುಂದುವರಿಸಲು ಒತ್ತಾಯಿಸದೇ, ಸಮಯ ಬಂದಾಗ ತಮ್ಮನ್ನು ಕಳುಹಿಸಿಕೊಡುವಂತೆ ತಮ್ಮ ಪ್ರೀತಿಪಾತ್ರರಿಗೆ ಮನವಿ ಮಾಡಿದ್ದರು. ಅವರ ಮನವಿಯು ತಮ್ಮೆಲ್ಲರ ಹೃದಯವನ್ನು ಸ್ಪರ್ಶಿಸಿದೆ ಎಂದು ಅವರ ಆಪ್ತರು ಹೇಳುತ್ತಾರೆ.
ಈ ವರ್ಷದ ಏಪ್ರಿಲ್ನಿಂದ ಎಸ್.ಎಂ.ಕೃಷ್ಣ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ಬಾಹ್ಯವಾಗಿ ಆಮ್ಲಜನಕ ನೀಡಬೇಕಾಯಿತು. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಏಪ್ರಿಲ್ 29 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದ ನಂತರ ಅವರನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಯಿತು. ದುರದೃಷ್ಟವಶಾತ್, ಅವರ ಆರೋಗ್ಯವು ಮತ್ತೆ ಕೈಕೊಟ್ಟಿತು. ಅಕ್ಟೋಬರ್ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.
ನಿಜ ಜೀವನದ ನಾಯಕನಾದ ಕೃಷ್ಣ ಅವರ ಮಾತುಗಳು, ಘನತೆ ಮತ್ತು ಶಾಂತಿಯಿಂದ ಬದುಕುವ ಮತ್ತು ಇಹಲೋಕ ತೊರೆಯುವ ಮಹತ್ವವನ್ನು ನಮಗೆಲ್ಲರಿಗೂ ಕಲಿಸುತ್ತದೆ. ಕೃಷ್ಣ ಅವರು ಮಾಡಿರುವ ವಿನಂತಿಯು ಘನತೆಯಿಂದ ಬದುಕುವ ಮತ್ತು ಸಾವಿನ ಮೌಲ್ಯವನ್ನು ಹೆಚ್ಚಿಸುವ ಮಾರ್ಗದರ್ಶಿಯಾಗಿದೆ ಎಂದು ಅವರ ಆಪ್ತರು ಹೇಳುತ್ತಾರೆ.
ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ: ಪಂಚಭೂತಗಳಲ್ಲಿ ಎಸ್.ಎಂ. ಕೃಷ್ಣ ಲೀನ
SM Krishna, SM ಕೃಷ್ಣಗೆ ‘ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ