newsics.com
ಯಾದಗಿರಿ: ಹಳ್ಳಕ್ಕೆ ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಯಾದಗಿರಿಯ ದೇವತ್ಕಲ್ ನಲ್ಲಿ ನಡೆದಿದೆ.
ಶ್ರೇಯಣ್ಣ (8), ಯುವರಾಜ (9) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ಇವರಿಬ್ಬರು ರವಿವಾರ ಮಧ್ಯಾಹ್ನ ಹಳ್ಳದಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದರು. ಹಳ್ಳದ ದಂಡೆಯಲ್ಲಿ ಬಾಲಕರ ಬಟ್ಟೆಗಳು ಇರುವುದು ಕಂಡು ಕುಟುಂಬಸ್ಥರು ಹುಡುಕಾಟವನ್ನು ನಡೆಸಿ ನಂತರ ಪೊಲೀಸರಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಕ್ಷಣ ಡಿವೈಎಸ್ಪಿ ಜಾವಿದ್ ಇನಾಂದಾರ್, ಪೊಲೀಸ್ ಇನ್ ಸ್ಪೆಕ್ಟರ್ ಆನಂದ ವಾಗಮೋಡೆ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಇಂದು ಬೆಳಗ್ಗೆಯಿಂದ ಮತ್ತೆ ಹುಡುಕಾಟ ಆರಂಭಿಸಿದ್ದು 9 ಗಂಟೆ ಸುಮಾರಿಗೆ ಇಬ್ಬರು ಬಾಲಕರ ಮೃತದೇಹಗಳು ಹಳ್ಳದಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.