newsics.com
ನ್ಯೂಸಿಕ್ಸ್.ಕಾಮ್
ಜಾತಕ ಅಥವಾ ಜನ್ಮಕುಂಡಲಿಯಿಂದ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಹುಟ್ಟಿದ ಸಮಯದಲ್ಲಿ ಗ್ರಹ, ನಕ್ಷತ್ರಗಳ ಸ್ಥಿತಿಯು ಮುಖ್ಯವಾಗಿರುತ್ತದೆ.
ವ್ಯಕ್ತಿಯು ಹುಟ್ಟಿದ ವಾರ ಸಹ ಜಾತಕ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತದೆ.
ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಲು ಜಾತಕ ಸಹಾಯಕ. ಹುಟ್ಟಿದ ವಾರ, ಘಳಿಗೆ, ಸಮಯ, ವಾರ, ಮಾಸ ಹೀಗೆ ಎಲ್ಲ ವಿಷಯಗಳನ್ನು ಲೆಕ್ಕಾಚಾರ ಹಾಕಿ ಜಾತಕವನ್ನು ಮಾಡಲಾಗುತ್ತದೆ.
ಹುಟ್ಟಿದ ವಾರದ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ಹೇಳಲಾಗುತ್ತದೆ. ವಾರದ ಯಾವ ದಿನ ಹುಟ್ಟಿದ್ದಾರೆಂಬುದು ಸಹ ವ್ಯಕ್ತಿಯ ಸ್ವಭಾವ ತಿಳಿಯಲು ಅನುಕೂಲವಾಗುತ್ತದೆ.
ನೀವು ಹುಟ್ಟಿದ ವಾರ ಯಾವುದು?
ಸೋಮವಾರ
ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ. ಸೋಮವಾರವು ಚಂದ್ರನ ವಾರವಾಗಿದೆ. ಈ ದಿನ ಜನಿಸಿದವರು ಶಾಂತಿಪ್ರಿಯರು ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವವರಾಗಿರುತ್ತಾರೆ. ಚಂದ್ರನು ತಂಪನ್ನು ನೀಡುವ ದೇವನಾಗಿದ್ದಾನೆ. ಸೋಮವಾರ ಜನಿಸಿದವರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಈ ದಿನ ಜನಿಸಿದವರ ಮಾತಿನಲ್ಲಿ ಮಧುರತೆ ಇರುತ್ತದೆ.
ಮಂಗಳವಾರ
ಈ ದಿನ ಜನಿಸಿದವರ ಮೇಲೆ ಮಂಗಳನ ಪ್ರಭಾವವಿರುತ್ತದೆ. ಮಂಗಳವಾರ ಜನಿಸಿದವರು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಾಗಿ ಹೊಂದಿರುತ್ತಾರೆ. ಈ ದಿನ ಜನಿಸಿದವರು ನ್ಯಾಯ ಪ್ರಿಯರಾಗಿರುತ್ತಾರೆ. ಮಂಗಳ ಗ್ರಹದ ಸ್ಥಿತಿ ನೀಚವಾಗಿದ್ದಾಗ ಮಾತ್ರ ಸ್ವಭಾವದಲ್ಲಿ ಸಿಟ್ಟು ಮತ್ತು ಹಟ ಕಾಣಿಸುತ್ತದೆ.
ಬುಧವಾರ
ಬುಧವಾರವು ಬುಧಗ್ರಹದ ಅಧಿಪತ್ಯದಲ್ಲಿರುತ್ತದೆ. ಬುಧ ಗ್ರಹವು ವಾಕ್ಚಾತುರ್ಯ ಮತ್ತು ಬುದ್ಧಿಯಕಾರಕ ಗ್ರಹವಾಗಿದೆ. ಹಾಗಾಗಿ ಈ ದಿನ ಜನಿಸಿದವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. ಈ ದಿನ ಜನಿಸಿದವರು ಮೃದುಭಾಷಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯಿರುತ್ತದೆ. ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣರಾಗಿರುತ್ತಾರೆ. ಬುಧ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಮಾತ್ರ ಕೆಲಸದ ವಿಷಯದಲ್ಲಿ ಗೊಂದಲಗಳು ಉದ್ಭವವಾಗುತ್ತವೆ.
ಗುರುವಾರ
ಈ ದಿನ ಜನಿಸಿದವರ ಮೇಲೆ ಗುರು ಬೃಹಸ್ಪತಿಯ ಅಧಿಪತ್ಯವಿರುತ್ತದೆ. ಹಾಗಾಗಿ ಗುರುವಾರ ಜನಿಸಿದವರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಗಂಭೀರ ಸ್ವಭಾವವನ್ನು ಹೊಂದಿರುವ ಈ ವ್ಯಕ್ತಿಗಳು ಇತರರ ಒಳ್ಳೆಯದನ್ನು ಬಯಸುತ್ತಾರೆ. ಗುರು ಗ್ರಹದ ಸ್ಥಿತಿ ನೀಚವಾಗಿದ್ದರೆ ಈ ವ್ಯಕ್ತಿಗಳು ತಪ್ಪು ದಾರಿ ತುಳಿಯುವ ಸಾಧ್ಯತೆ ಇರುತ್ತದೆ. ಗುರುವಿನ ಪ್ರಭಾವದಿಂದ ಈ ದಿನ ಜನಿಸಿದವರು ಸಾತ್ವಿಕ ಗುಣ ಹೊಂದಿರುತ್ತಾರೆ.
ಶುಕ್ರವಾರ
ಈ ದಿನ ಜನಿಸಿದವರ ಮೇಲೆ ಶುಕ್ರಗ್ರಹ ಪ್ರಭಾವವಿರುತ್ತದೆ. ಹಾಗಾಗಿ ಈ ವ್ಯಕ್ತಿಗಳಿಗೆ ಭೌತಿಕ ಸುಖದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಶುಕ್ರವಾರ ಜನಿಸಿದವರು ಕಲೆ-ಕರಕುಶಲತೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಸ್ವಭಾವದಲ್ಲಿ ವಿನಮ್ರತೆಯನ್ನು ಹೊಂದಿರುವ ಈ ವ್ಯಕ್ತಿಗಳು ಆಧುನಿಕ ವಿಚಾರಗಳಿಗೆ ಮಹತ್ವವನ್ನು ನೀಡುತ್ತಾರೆ.
ಶನಿವಾರ
ಶನಿವಾರ ಜನಿಸಿದವರ ಮೇಲೆ ಶನಿಗ್ರಹದ ಪ್ರಭಾವವಿರುತ್ತದೆ. ಶನಿಯು ನ್ಯಾಯದ ದೇವನಾಗಿರುವ ಕಾರಣ ಶನಿಯ ಶುಭ ದೃಷ್ಟಿಯಿರುವಾಗ ವ್ಯಕ್ತಿಯು ನ್ಯಾಯ ಪ್ರಿಯ ಮತ್ತು ಕರ್ತವ್ಯ ಪಾಲನೆಯಲ್ಲಿ ದಕ್ಷತೆಯನ್ನು ಹೊಂದಿರುತ್ತಾನೆ. ಈ ವ್ಯಕ್ತಿಗಳು ಮಾತಿಗೆ ಬದ್ಧರಾಗಿರುವುದಲ್ಲದೆ, ಸಿದ್ಧಾಂತಗಳನ್ನು ಪಾಲಿಸುವಲ್ಲಿ ಮೊದಲಿಗರಾಗಿರುತ್ತಾರೆ.
ಭಾನುವಾರ
ಸೂರ್ಯದೇವನ ಅಧಿಪತ್ಯವಿರುವ ವಾರವೇ ರವಿವಾರ ಅಥವಾ ಭಾನುವಾರ. ಈ ದಿನ ಜನಿಸಿರುವ ವ್ಯಕ್ತಿಗಳ ಮೇಲೆ ಸೂರ್ಯದೇವನ ಪ್ರಭಾವವಿರುತ್ತದೆ. ಇವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿರುತ್ತದೆ. ರವಿವಾರ ಜನಿಸಿದವರು ಉದಾರ ಸ್ವಭಾವ ಹೊಂದಿರುತ್ತಾರೆ. ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿಯಾಗಿರುವುದಲ್ಲದೇ, ಧೈರ್ಯವಂತರಾಗಿರುತ್ತಾರೆ.
ಬುಧಾದಿತ್ಯ ರಾಜಯೋಗ: ಈ ಐದು ರಾಶಿಗಳಿಗೆ ನವೆಂಬರ್ ಎರಡನೇ ವಾರ ಸೂಪರ್ ಸಮಯ