newsics.com
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಆದೇಶವನ್ನು ನಾಳೆಗೆ ಕಾಯ್ದಿರಿಸಲಾಗಿದೆ.
ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹಾಜರಿದ್ದರು. ಮೊದಲು ವಾದ ಮಂಡಿಸಿದ ಸಿ.ವಿ ನಾಗೇಶ್, ದರ್ಶನ್ ಗೆ ಬೆನ್ನಿನ ನರದ L5 – S1 ಡಿಸ್ಕ್ ಸಮಸ್ಯೆ ಇದೆ. ಬೆನ್ನಿಗೆ ಪಟ್ಟು ಕಟ್ಟು, ಮಾಸಾಜ್ ಮಾಡಲಾಗಿದೆ. ಅದಕ್ಕೆ ಸ್ವಲ್ಪ ನೋವು ಕಡಿಮೆಯಾಗಿದೆ. ಆದರೆ ಎರಡು ಕಾಲಿನ ಊತದಿಂದ ಮುಂದೆ ಸಮಸ್ಯೆ ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಮಾಡದಿದ್ದರೆ ಮುಂದೆ ಕಾಲುಗಳು ಸ್ಪರ್ಶ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ದರ್ಶನ್ ಪರ ವಕೀಲರ ವಾದ ಆಲಿಸಿದ ಜಡ್ಜ್ ಬೆಂಗಳೂರಿನ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯ ವ್ಯವಸ್ಥೆ ಇದೆ ಎಂದು ಪ್ರಶ್ನಿಸಿದರು. ಅದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಇದೆ ಎಂದರು.
ಎರಡು ಕಡೆ ವಕೀಲರ ವಾದ, ಪ್ರತಿವಾದ ಆಲಿಸಿದ ಜಡ್ಜ್, ಮಧ್ಯಂತರ ಜಾಮೀನು ಆದೇಶವನ್ನು ನಾಳೆಗೆ ಕಾಯ್ದಿರಿಸಿದ್ದಾರೆ.