newsics.com
ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚನ್ನಪಟ್ಟಣದಲ್ಲಿ ಗೆಲ್ಲುವ ಕುದುರೆ ಎಂದೇ ಬಿಂಬಿಸಿಕೊಂಡಿರುವ ಸಿಪಿ ಯೋಗೇಶ್ವರ್ ಅವರ ಮಾಸ್ಟರ್ ಪ್ಲ್ಯಾನ್ ಸದ್ಯ ವರ್ಕೌಟ್ ಆಗಿದೆ.
ದಳಪತಿಗಳ ಒಳಸಂಚಿನಿಂದಾಗಿ ಸಿಪಿ ಯೋಗೇಶ್ವರ್ ಅವರು ಎಷ್ಟೇ ಪ್ರಯತ್ನಪಟ್ಟರೂ ಚನ್ನಪಟ್ಟಣದಿಂದ ಟಿಕೆಟ್ ಸಿಗಲಿಲ್ಲ.
ಕೇಂದ್ರ ಮಟ್ಟದಲ್ಲಿ ಸಿಪಿವೈ ಲಾಬಿ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಸಿಪಿವೈ ಸಾಕಷ್ಟು ಅಳೆದು ತೂಗಿ ಪಕ್ಷ ಬದಲಾಯಿಸಿದ್ದಾರೆ.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದರ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ. ಸಿಪಿವೈ ಚನ್ನಪಟ್ಟಣದಲ್ಲಿ ಒಬ್ಬ ಪ್ರಭಾವಿ ನಾಯಕ. ಈವರೆಗೆ ಚನ್ನಪಟ್ಟಣದಲ್ಲಿ ಬಿಜೆಪಿಗೆ ಇದ್ದ ಏಕೈಕ ಗೆಲ್ಲುವ ಕುದುರೆ ಅಂದರೆ ಅದು ಸಿಪಿವೈ ಮಾತ್ರ. ಆದರೆ ಅದೇ ಬಿಜೆಪಿಗೆ ಈ ಬಾರಿ ಸಿಪಿವೈಗೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಲಾಗಲಿಲ್ಲ. ಯಾಕೆಂದರೆ ಇದಕ್ಕೆ ಅಡ್ಡಿಯಾಗಿದ್ದು ಮೈತ್ರಿ ಪಕ್ಷ ಜೆಡಿಎಸ್.
ಚನ್ನಪಟ್ಟಣದಲ್ಲಿ ಬಿಜೆಪಿಗಿಂತಲೂ ಹೆಚ್ಚು ಜನಬಲ ಹೊಂದಿರುವುದು ಜೆಡಿಎಸ್. ಹೀಗಾಗಿ ಕಳೆದ ಬಾರಿ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಅವರನ್ನು ಎಚ್ಡಿ ಕುಮಾರಸ್ವಾಮಿ ಸೋಲಿಸಿದ್ದರು. ಆದರೆ ಈ ಗೆಲುವು ಹೆಚ್ಚು ಮತಗಳ ಅಂತರದಿಂದ ಆಗಿರಲಿಲ್ಲ. ಈ ಹಿಂದೆ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದ ಸಿಪಿವೈ ಈ ಬಾರಿಯಾದರೂ ಟಿಕೆಟ್ ಪಡೆದು ಗೆಲ್ಲುವ ಇಂಗಿತ ಹೊಂದಿದ್ದರು. ಆದರೆ ಮೈತ್ರಿ ಇದಕ್ಕೆ ಅವಕಾಶ ನೀಡಲೇ ಇಲ್ಲ.
ಹೀಗಾಗಿ ಬೇಸರಗೊಂಡ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಷ್ಟಕ್ಕೂ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರುವುದರ ಹಿಂದೆ ದೊಡ್ಡ ಜಾತಿ ಲೆಕ್ಕಾಚಾರವಿದೆ. ಸಿಪಿವೈ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೂ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.
ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್ಗೆ ಕಾಂಗ್ರೆಸ್ ಟಿಕೆಟ್ ನೀಡಲಿದ್ದು, ಯೋಗೇಶ್ವರ್ ಗೆಲ್ಲುವ ಕನಸು ಕೂಡ ನನಸಾಗಲಿದೆ. ಇದಕ್ಕೆ ಪೂರಕವಾಗಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಂತೆ ಕಾರ್ಯಕರ್ತರೂ ತಮ್ಮ ನೆಚ್ಚಿನ ನಾಯಕನ ನಿರ್ಧಾರ ಸ್ವಾಗತಿಸಿದ್ದಾರೆ. ಯೋಗೇಶ್ವರ್ ಇರದ ಪಕ್ಷಕ್ಕೆ ನಾವು ಬೆಂಬಲ ನೀಡುವುದಿಲ್ಲ. ನಮ್ಮ ನಾಯಕ ಎಲ್ಲಿ ಇರುತ್ತಾರೋ ಅದೇ ನಮ್ಮ ಪಕ್ಷ ಎಂದಿದ್ದಾರೆ.
ಕಾಂಗ್ರೆಸ್ ಪಂಚ ಗ್ಯಾರಂಟಿ ಲಾಭ ಸಿಪಿವೈಗೆ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಗ್ಯಾರಂಟಿಗಳನ್ನು ಜಾರಿಗೆ ತಂದು ಜನಮೆಚ್ಚುಗೆ ಪಡೆದುಕೊಂಡಿದೆ. ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಜನರು ಮತ ನೀಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸಿಪಿ ಯೋಗೇಶ್ವರ್ ಅವರನ್ನು ಪಂಚ ಗ್ಯಾರಂಟಿಗಳೇ ಗೆಲ್ಲಿಸಲಿವೆ.
ಜಾತಿ ಲೆಕ್ಕಾಚಾರ:
ಚನ್ನಪಟ್ಟಣ ಒಕ್ಕಲಿಗರ ಶಕ್ತಿ ಕೇಂದ್ರವಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ 2.32 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ ಒಕ್ಕಲಿಗ ಸಮುದಾಯದ ಸುಮಾರು 1.05 ಲಕ್ಷ ಮತಗಳಿವೆ. 30 ಸಾವಿರ ಮುಸ್ಲಿಂ ಮತಗಳು, ದಲಿತ ಮತಗಳು 40 ಸಾವಿರ ಇದೆ. ಬೆಸ್ತರು ಮತ್ತು ತಿಗಳರು ತಲಾ 10 ಸಾವಿರ, ಇತರೆ ಹಿಂದುಳಿದ ವರ್ಗಗಳು 25 ಸಾವಿರದಷ್ಟಿದ್ದರೆ, 15 ಸಾವಿರ ಲಿಂಗಾಯತರ ಮತಗಳಿವೆ. ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳ 5 ಸಾವಿರ ಮತಗಳಿವೆ. ಇದರಲ್ಲಿ ದಲಿತ, ಮುಸ್ಲಿಂ, ಒಕ್ಕಲಿಗ ಸಮುದಾಯದ ಹೆಚ್ಚು ಮತಗಳು ಕಾಂಗ್ರೆಸ್ ಪರವಾಗಿದ್ದು ಸಿಪಿ ಯೋಗೇಶ್ವರ್ ಅವರಿಗೆ ಆನೆ ಬಲ ನೀಡಲಿವೆ. ಇದೆಲ್ಲಾ ವಿಚಾರಗಳನ್ನು ಅಳೆದು ತೂಗಿಯೇ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದು, ಇವರ ಲೆಕ್ಕಾಚಾರ ಎಷ್ಟರಮಟ್ಟಿಗೆ ಕಾರ್ಯಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.