newsics.com
ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ಅಂಗಡಿಮಾರು ರಾಮಚಂದ್ರ ಭಟ್(72) ನಿಧನರಾದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾವು ವಾಸ್ತವ್ಯವಿದ್ದ ಉಡುಪಿ ಪೇಜಾವರ ಮಠದ ಅತಿಥಿಗೃಹದಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರಿದ್ದಾರೆ.
ವಿದ್ವಾನ್ ರಾಮಚಂದ್ರ ಭಟ್ಟರ ನಿಧನಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ವಿಶ್ವಪ್ರಸನ್ನ ತೀರ್ಥರು ಸೇರಿ ಸ್ವಾಮೀಜಿಗಳು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜ್ಯೋತಿಷ್ಯ, ವೇದಾಂತ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ ರಾಮಚಂದ್ರ ಭಟ್ಟರು, ಋಗ್ವೇದದ ಪವಮಾನ ಸೂಕ್ತಗಳಿಗೆ ಕನ್ನಡ ವ್ಯಾಖ್ಯಾನ ಬರೆದು ವಿಶ್ವೇಶತೀರ್ಥರ ಮೂಲಕ ಲೋಕಾರ್ಪಣೆಗೊಳಿಸಿದ್ದರು.
ಹಲವು ವರ್ಷಗಳ ಕಾಲ ಮುಂಬಯಿ ಅದಮಾರು ಮಠದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಭಟ್ಟರು ಬಳಿಕ ವಿಶ್ವೇಶತೀರ್ಥರ ಪಂಚಮ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣದ ಸಹ ದಿವಾನರಾಗಿಯೂ ಸೇವೆ ಸಲ್ಲಿಸಿದ್ದರು.
ವಿದ್ವಾನ್ ರಾಮಚಂದ್ರ ಭಟ್ಟರ ಅಪೇಕ್ಷೆಯಂತೆ ಪಾರ್ಥಿವ ಶರೀರವನ್ನು ಮಣಿಪಾಲದ ಕೆಎಂಸಿ ಕಾಲೇಜಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಲಾಗಿದೆ.
ಕ್ರೀಡೆ ಕಲಿಸುವ ನೆಪದಲ್ಲಿ ಹತ್ತಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಯುವಕನ ಬಂಧನ