newsics. com
ಲಕ್ನೋ: ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 116 ಮಂದಿ ಬಲಿಯಾಗಿದ್ದಾರೆ. ಸತ್ಸಂಗ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಅವರು ನಾಪತ್ತೆಯಾಗಿದ್ದಾರೆ.
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹದ್ದೂರ್ ನಗರಿ ಗ್ರಾಮದ ರೈತ ನನ್ನೆ ಲಾಲ್ ಮತ್ತು ಕಟೋರಿ ದೇವಿಯವರ ಮಗನಾಗಿ ಜನಿಸಿದ್ದರು. ಗುರು ಭೋಲೆ ಬಾಬಾ ಅವರ ಮೂಲ ಹೆಸರು ಸೂರಾಜ್ ಪಾಲ್. ಇವರಿಗೆ ಇಬ್ಬರು ಸಹೋದರರಿದ್ದು ಒಬ್ಬರು ಮೃತಪಟ್ಟಿದ್ದಾರೆ.
ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಕಾಲೇಜ್ ಶಿಕ್ಷಣ ಓದಿ ಉತ್ತರ ಪ್ರದೇಶ ಪೊಲೀಸ್ನ ಸ್ಥಳೀಯ ಗುಪ್ತಚರ ಘಟಕದಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದರು. ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಇವರ ಮನಸ್ಸು ಆಧ್ಯಾತ್ಮಿಕತೆಯ ಕಡೆಗೆ ತಿರುಗಿತು. 1999 ರಲ್ಲಿ ಪೊಲೀಸ್ ಕೆಲಸವನ್ನು ತೊರೆದ ಬಳಿಕ ತನ್ನ ಹೆಸರನ್ನು ನಾರಾಯಣ್ ಸಾಕರ್ ಹರಿ ಎಂದು ಬದಲಾಯಿಸಿ ಧಾರ್ಮಿಕ ಉಪನ್ಯಾಸ ನೀಡಲು ಆರಂಭಿಸಿದರು.
ಇವರು ಕೇಸರಿ ಬಟ್ಟೆಯನ್ನು ಧರಿಸುತ್ತಿರಲಿಲ್ಲ. ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸುತ್ತಿದ್ದರು. ತನಗೆ ಸಿಕ್ಕಿದ ದೇಣಿಗೆಯನ್ನು ನಾನು ಇಟ್ಟುಕೊಳ್ಳುವುದಿಲ್ಲ. ಅದನ್ನು ಭಕ್ತರಿಗೆ ನೀಡುತ್ತೇನೆಂದು ಭೋಲೆ ಬಾಬಾ ಉಪದೇಶದಲ್ಲಿ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಉಪನ್ಯಾಸ ನೀಡುವಾಗ ಹತ್ತಿರದಲ್ಲೇ ಪತ್ನಿ ಸಹ ಇರುತ್ತಾರೆ.
ನಾನು ಹರಿ(ವಿಷ್ಣು) ಭಕ್ತ ಎಂದು ಹೇಳಿಕೊಳ್ಳುವ ಇವರಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ. ಕಾಲ್ತುಳಿತವಾದ ನಂತರ ಭೋಲೆ ಬಾಬಾ ನಾಪತ್ತೆಯಾಗಿದ್ದು ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.