newsics.com/ನ್ಯೂಸಿಕ್ಸ್
ಚೆನ್ನೈ: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲು ಇದೀಗ ಎಐಎಡಿಎಂಕೆಯಲ್ಲಿ ಆಂತರಿಕ ಬಿರುಕಿಗೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಶಾಸಕರು ಭಿನ್ನಾಭಿಪ್ರಾಯ ಹೊಂದಿದ್ದು, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜೀನಾಮೆ ನೀಡುವಂತೆ ಅಗ್ರಹಿಸಿದ್ದಾರೆ.
ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಕೋರುತ್ತಿದ್ದ ಹೊತ್ತಲ್ಲಿ AIADMK ನಾಯಕ ಪಳನಿಸ್ವಾಮಿ ತಮ್ಮ ಪಕ್ಷದ ಶಾಸಕರ ಜೊತೆ ಹಲವು ಸಭೆ ನಡೆಸಿದ್ದರು. ಆ ವೇಳೆ ಗೆದ್ದ ಶಾಸಕರು ಮತ್ತು ಷಣ್ಮುಗಂ ಬಣವು, ನಟ ವಿಜಯ್ಗೆ ಬೆಂಬಲ ನೀಡಬೇಕೆಂದು ಹಲವರು ಒತ್ತಡ ಹೇರಿದ್ದರು. ಆದರೆ, ಎಡಪ್ಪಾಡಿ ಕೆ ಪಳನಿಸ್ವಾಮಿ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ನಲ್ಲಿ ಇರಿಸಿದ್ದು. ಆ ಬೆನ್ನಲ್ಲೇ AIADMKಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಪುದುಚೇರಿಯ ಐಷಾರಾಮಿ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ತಂಗಿದ್ದ ಕೆಲ ಶಾಸಕರು ಬಳಿಕ ಚೆನ್ನೈಗೆ ಮರಳಿ ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು. 47 ಶಾಸಕರಲ್ಲಿ ಸುಮಾರು ಐವರು ಸಭೆಗೆ ಗೈರುಹಾಜರಾಗಿದ್ದರು.
ಪಕ್ಷದೊಳಗೆ ಸ್ಪಷ್ಟವಾದ ಒಡಕು ಇದೆ. ಅನೇಕ ಶಾಸಕರು ನಾಯಕತ್ವ ಬದಲಾವಣೆಯನ್ನು ಬಯಸುತ್ತಾರೆ. ಪಳನಿಸ್ವಾಮಿ ನಾಯಕರಾಗಿ ಮುಂದುವರಿದರೆ, ಕೆಲವು ಶಾಸಕರು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಪಕ್ಷದ ಉನ್ನತ ಹುದ್ದೆಯಿಂದ ಪಳನಿಸ್ವಾಮಿ ‘ಸ್ವಯಂಪ್ರೇರಣೆಯಿಂದ ಕೆಳಗಿಳಿಯಬೇಕು’. ಇದರಿಂದ ಪಕ್ಷ ಮತ್ತೆ ಒಂದಾಗಲು ಮತ್ತು ಮುಂದಿನ ಚುನಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಎಐಎಡಿಎಂಕೆ ಮಾಜಿ ನಾಯಕ ಕೆಸಿ ಪಳನಿಸ್ವಾಮಿ ಹೇಳಿದ್ದಾರೆ.
ಏಪ್ರಿಲ್ನಲ್ಲಿ 23ರಂದು 234 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 108 ಸ್ಥಾನವನ್ನು ಟಿವಿಕೆ ಗೆದ್ದುಕೊಂಡಿತ್ತು. ಇನ್ನು 75 ಸ್ಥಾನಗಳನ್ನು ಮಾತ್ರ ಮೈತ್ರಿ ಕೂಟ ಗಳಿಸಿತ್ತು. 47 ಸ್ಥಾನಗಳನ್ನು ಮಾತ್ರ ಎಐಎಡಿಎಂಕೆ ಗಳಿಸಿ ಹೀನಾಯ ಸೋಲನ್ನು ಕಂಡಿತ್ತು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಮಾತ್ರ ಗೆದ್ದುಕೊಂಡಿತ್ತು. ಇನ್ನು 2024ರಲ್ಲಿ ಶೂನ್ಯ ಕ್ಷೇತ್ರವನ್ನು ಸಂಪಾದನೆ ಮಾಡಿ ಹೀನಾಯ ಸೋಲನ್ನು ಎಐಎಡಿಎಂಕೆ ಕಂಡಿತ್ತು.
ಎಡಪ್ಪಾಡಿ ಪಳನಿಸ್ವಾಮಿ ಅವರ ನಾಯಕತ್ವದ ಮೇಲೆ ಅಸಮಾಧಾನ ಹೊಂದಿರುವ ಕೆಲವು ನಾಯಕರು ವಿಜಯ್ ಜೊತೆ ಕೈಜೋಡಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜೀನಾಮೆಗೂ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.
https://www.newsics.com/2026/05/12/bengal-cm-suvendu-retains-3-key-portfolios/