newsics.com/ನ್ಯೂಸಿಕ್ಸ್
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ನಾಳೆ (ಶನಿವಾರ) ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ನಿರೀಕ್ಷೆಗಳ ನಡುವೆಯೇ, ಈಗ ಲೋಕಭವನ (ರಾಜಭವನ) ಮೂಲಗಳಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
https://youtube.com/shorts/gjYZnQ_VPsc?si=qVOf4mHBsp6RN8ZV
ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ಅವರಿಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣವಚನ ಸ್ವೀಕರಿಸಲು ಅನುಮತಿ ನಿರಾಕರಿಸಿದ್ದಾರೆ.
ಶನಿವಾರ ಬೆಳಿಗ್ಗೆ ನಡೆಯಬೇಕಿದ್ದ ಪಟ್ಟಾಭಿಷೇಕದ ಆಸೆ ಈಗ ಕಮರಿಹೋಗಿದ್ದು, ಸಂಖ್ಯಾಬಲದ ಕೊರತೆಯೇ ವಿಜಯ್ಗೆ ಅತಿದೊಡ್ಡ ವಿಘ್ನವಾಗಿ ಪರಿಣಮಿಸಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ಆದರೆ, ವಿಜಯ್ ಅವರು ಕೇವಲ 116 ಶಾಸಕರ ಬೆಂಬಲವನ್ನು ಮಾತ್ರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಹುಮತಕ್ಕೆ ಇನ್ನೂ ಇಬ್ಬರು ಶಾಸಕರ ಕೊರತೆಯಿದ್ದು, ರಾಜ್ಯಪಾಲರು ಕೇಳಿದಂತೆ ಬೆಂಬಲದ ಅಧಿಕೃತ ಪತ್ರಗಳನ್ನು ಒದಗಿಸಲು ವಿಜಯ್ ವಿಫಲರಾಗಿದ್ದಾರೆ.
ವಿಜಯ್ ಅವರು ವಿಸಿಕೆ (VCK), ಎಎಮ್ಎಂಕೆಯ ಟಿಟಿವಿ ದಿನಕರನ್ ಮತ್ತು ಐಯುಎಂಎಲ್ (IUML) ಪಕ್ಷಗಳ ಜೊತೆ ತೀವ್ರ ಮಾತುಕತೆ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಐಯುಎಂಎಲ್ ತಾನು ಟಿವಿಕೆ ಮೈತ್ರಿಕೂಟದ ಭಾಗವಲ್ಲ ಎಂದು ಪತ್ರ ಬಿಡುಗಡೆ ಮಾಡಿದೆ. ಇತ್ತ ಟಿಟಿವಿ ದಿನಕರನ್ ಅವರು ಎಐಎಡಿಎಂಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇನ್ನು ವಿಸಿಕೆ ಕೂಡ ಅಧಿಕೃತ ಬೆಂಬಲದ ಪತ್ರ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.
ಬಿಜೆಪಿಯಂತಹ ಕೋಮುವಾದಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ವಿಜಯ್ಗೆ ಬೆಂಬಲ ನೀಡಿದೆ. ಈ ನಡುವೆ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ 7 ವರ್ಷಗಳ ದೋಸ್ತಿ ಕಡಿದುಬಿದ್ದಿದ್ದು, ಪರಸ್ಪರ ‘ನಂಬಿಕೆ ದ್ರೋಹ’ದ ಆರೋಪಗಳು ಕೇಳಿಬರುತ್ತಿವೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ವಿಜಯ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿವೆ.
ಒಟ್ಟಾರೆಯಾಗಿ, ತಮಿಳುನಾಡಿನ ಗದ್ದುಗೆ ಏರಲು ಸಜ್ಜಾಗಿದ್ದ ವಿಜಯ್ ಅವರಿಗೆ ಮಿತ್ರಪಕ್ಷಗಳ ಕೊನೆಕ್ಷಣದ ‘ಬೆಂಬಲ ವಾಪಸ್’ ಅಥವಾ ‘ಬೆಂಬಲ ನೀಡಲು ವಿಳಂಬ’ ಮಾಡುತ್ತಿರುವುದು ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಈ ರಾಜಕೀಯ ಜಿದ್ದಾಜಿದ್ದಿ ನಾಳೆ ಯಾವ ತಿರುವು ಪಡೆಯಲಿದೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.
https://www.newsics.com/2026/05/09/the-secret-to-your-health-lies-in-the-hair-growing-on-your-toes/