newsics.com
ಈಗ ಬಿರು ಬೇಸಿಗೆಗಾಲ. ಮನೆಯಿಂದ ಹೊರಗೆ ಕಾಲಿಡುವ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ. ಅಷ್ಟರ ಮಟ್ಟಿಗೆ ತಾಪಮಾನ ಜೋರಾಗಿದೆ. ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲಿ ಓಡಾಡುವುದು, ಒಂದು ಸೂರಿನಡಿ ಕೂರುವುದು ಕಷ್ಟಸಾಧ್ಯ ಎನ್ನುವಂತಾಗಿದೆ.
https://youtube.com/shorts/7P5j592ICRU?si=brWLJ4hEetaflYiu
ನೆತ್ತಿ ಸುಡುವ ಬಿಸಿಲಿನ ಬೇಗೆಯಲ್ಲಿ ಫ್ಯಾನ್, ಎಸಿಗಳು ವಿಪರೀತ ಕೆಲಸ ಮಾಡುತ್ತವೆ. ಜನರು ತಾಜಾ ಹಣ್ಣಿನ, ರೆಡಿಮೇಡ್ ಸಾಫ್ಟ್ ಡ್ರಿಂಕ್ಸ್ ಸೇರಿದಂತೆ ಇನ್ನಿತರ ಪಾನೀಯಗಳನ್ನು ಸೇವಿಸುತ್ತಾರೆ. ಕೆಲವರಂತು ಸೆಕೆ ತಡೆಯಲಾಗದೆ, ಕೋಲ್ಡ್ ನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ಅಸಲಿಗೆ, ಇವೆಲ್ಲವೂ ನಾಲಿಗೆ ಮತ್ತು ಗಂಟಲನ್ನು ತಂಪಾಗಿರಿಸುವುದೇ ವಿನಃ ದೇಹದ ಒಳಗಲ್ಲ. ಆದರೆ ಇವುಗಳ ಅತಿಯಾದ ಸೇವನೆಯಿಂದ ಕೆಮ್ಮು, ಶೀತ ಮತ್ತು ನ್ಯುಮೋನಿಯಾ ಬರುವ ಸಾಧ್ಯತೆ ಇದೆ ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಮುರಳೀಧರ್, ‘ಹೊರಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದ್ದಾಗ ದೇಹಕ್ಕೆ ಅತಿ ತಣ್ಣನೆಯ ಆಹಾರ ಅಥವಾ ಪಾನೀಯ ಸೇರಿದರೆ ರೋಗನಿರೋಧಕ ಶಕ್ತಿ ಕುಂದಬಹುದು. ಇದರಿಂದ ಕೆಮ್ಮು, ನೆಗಡಿ, ಶೀತ ಮಾತ್ರವಲ್ಲದೆ ನ್ಯುಮೋನಿಯಾದಂತಹ ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು’ ಎಂದು ತಿಳಿಸಿದ್ದಾರೆ.
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೃತಕ ಪಾನೀಯಗಳಿಗಿಂತ ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳಿಗೆ ಆದ್ಯತೆ ನೀಡುವುದು ಉತ್ತಮ. ಐಸ್ಕ್ರೀಂ ಮತ್ತು ಕೂಲ್ ಡ್ರಿಂಕ್ಸ್ಗಳ ಸೇವನೆ ಮಿತವಾಗಿರಲಿ ಎಂಬುದು ವೈದ್ಯರ ಕಿವಿಮಾತು.