https://youtube.com/shorts/qIu1k1AjcVg?si=asT_CsSQI4v14g8C
newsics.com
ನವದೆಹಲಿ: ಭಾರತದಲ್ಲಿ ಎಲ್ಜಿಪಿ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಕಾರಣ, ಕೆಲವು ಪೆಟ್ರೋಲ್ ಮತ್ತು ಡೀಸೆಲ್ ಬಂಕ್ಗಳಲ್ಲಿ ಸೀಮೆಎಣ್ಣೆ ವಿತರಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ತುರ್ತು ಕ್ರಮವು ಮುಂದಿನ 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.ಈ ನಿಯಮ ಸಡಿಲಿಕೆಯ ಅಡಿಯಲ್ಲಿ, ಇಂತಹ ಬಂಕ್ಗಳು ತಲಾ 5,000 ಲೀಟರ್ಗಳವರೆಗೆ ಸೀಮೆಎಣ್ಣೆಯನ್ನು ಸಂಗ್ರಹಿಸಿ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
ಎಲ್ಪಿಜಿ (LPG) ಪೂರೈಕೆಯಲ್ಲಿ ಉಂಟಾಗಬಹುದಾದ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಬಡ ಕುಟುಂಬಗಳಿಗೆ ಅಡುಗೆ ಹಾಗೂ ಬೆಳಕಿನ ವ್ಯವಸ್ಥೆಗೆ ಪರ್ಯಾಯ ಇಂಧನ ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ. ಪೆಟ್ರೋಲ್ ಬಂಕ್ಗಳಲ್ಲಿ ಸೀಮೆಎಣ್ಣೆ ಸಂಗ್ರಹಣೆಗೆ ಪೆಟ್ರೋಲಿಯಂ ಸುರಕ್ಷತಾ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದ್ದರೂ, ಬೆಂಕಿ ಅವಘಡ ಅಥವಾ ಕಲಬೆರಕೆ ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸೂಚಿಸಿದೆ. ಸಾಂಪ್ರದಾಯಿಕ ಪಡಿತರ ಅಂಗಡಿಗಳ ಜೊತೆಗೆ ಈ ಬಂಕ್ಗಳು ಪೂರಕವಾಗಿ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ಸೌಲಭ್ಯವನ್ನು ಉತ್ತರ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ದೆಹಲಿ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಅಗತ್ಯವಿರುವ ಕುಟುಂಬಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಈ ಪ್ರದೇಶಗಳಲ್ಲಿ ಸೀಮೆಎಣ್ಣೆ ಸರಬರಾಜು ಪುನರಾರಂಭಿಸಲಾಗಿದೆ.
ಈ ಸೀಮೆಎಣ್ಣೆಯನ್ನು ಅಡುಗೆ ಮತ್ತು ಬೆಳಕು ಮುಂತಾದ ಗೃಹಬಳಕೆಗೆ ಮಾತ್ರ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸೀಮೆಎಣ್ಣೆಯ ಸಂಗ್ರಹಣೆ ಮತ್ತು ಸಾಗಣೆಗೆ ಸಂಬಂಧಿಸಿದ ಕೆಲವು ಪರವಾನಗಿ ನಿಯಮಗಳನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಇದು ವಿತರಕರು ಮತ್ತು ಸಾಗಣೆದಾರರಿಗೆ ಕೆಲಸವನ್ನು ಸರಳಗೊಳಿಸುತ್ತದೆ ಮತ್ತು ವೇಗವಾಗಿ ಪೂರೈಕೆಯನ್ನು ಸುಗಮಗೊಳಿಸುತ್ತದೆ. ಆದ್ರೆ, ಸುರಕ್ಷತಾ ನಿಯಮಗಳನ್ನು ಸಡಿಲಿಸಲಾಗಿಲ್ಲ ಮತ್ತು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
https://www.newsics.com/2026/03/30/heavy-rain-likely-in-the-state-yellow-alert-for-17-districts/