https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಗದಗ: ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ, ಹದಿನೈದಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಗಜೇಂದ್ರಗಡದ ಶಿವಾಜಿಪೇಟಿಯ 55 ವರ್ಷದ ಮರಿಯಂಬ ದಾದೇಸಾಬ್ ಹುನಗುಂದ, 45 ವರ್ಷದ ಅನ್ನಪೂರ್ಣ ಲಕ್ಷ್ಮಣ ಚಂಗಳಿ ಹಾಗೂ 30ವರ್ಷದ ಸುಜಾತ ರಾಜಪ್ಪ ಹೊಸಮನಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ರೂಸರ್ ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ, ಕ್ರೂಸರ್ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ಮೃತರು ಗಜೇಂದ್ರಗಡ ಶಿವಾಜಿ ಪೇಟೆಯ ಕಾರ್ಮಿಕರಾಗಿದ್ದು, ಗಜೇಂದ್ರಗಡದಿಂದ ರೋಣ ಕಡೆಗೆ ಕಡಲೆ ಕೀಳುವ ಕೆಲಸಕ್ಕಾಗಿ ತೆರಳುತ್ತಿದ್ದರು. ಇದೇ ವೇಳೆ ರೋಣದಿಂದ ಗಜೇಂದ್ರಗಡದತ್ತ ಹೊರಟಿದ್ದ ಕ್ಯಾಂಟರ್ ಲಾರಿ ಅಪಘಾತಕ್ಕೆ ಕಾರಣವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ರೋಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.