Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉತ್ತರಕನ್ನಡದ ಭಟ್ಕಳದಲ್ಲಿ ಪ್ರಸಿದ್ಧ ಶೇಡಬರಿ ಜಟಕ ಮಹಾಸತಿ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ
ಜಾತ್ರೆಯ ಅಂಗವಾಗಿ ಭಕ್ತರು ಶೆಡಬರಿ ಜಟಕಾ ಮಹಾಸತಿ ದೇವಿಗೆ ಹಾಗೂ ಪರಿವಾರ ದೇವರಿಗೆ ಸಿಂಗಾರದ ಹೂವಿನ ವಿಶೇಷಪೂಜೆ, ಕಾಣಿಕೆಗಳನ್ನು ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿದರು. ಭಕ್ತರು ಶೇಡಿ ಮರವನ್ನು ಏರುವ ಹರಕೆ ಈ ಜಾತ್ರೆಯ ವಿಶೇಷ.
ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹೇಳಿಕೆ ಮಾಡಿಕೊಂಡರೆ, ಆ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮಹಾಸತಿ ದೇವಿಯ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ.
‘ಶೇಡಿ’ ಎಂದರೆ ಮಣ್ಣಿನಿಂದ ಕೂಡಿರುವುದು, ‘ಬರಿ’ ಎಂದರೆ ಇಳಿಜಾರು ಪ್ರದೇಶ. ಈ ಭೌಗೋಳಿಕ ಹಿನ್ನೆಲೆಯಲ್ಲೇ ಪ್ರತಿಷ್ಠಾಪಿತ ದೇವಿಯನ್ನು ಶೇಡಬರಿ ಮಹಾಸತಿ ದೇವಿ ಎಂದು ಕರೆಯಲಾಗುತ್ತದೆ. ಜಾತ್ರೆಯ ಆರಂಭದ ಅಂಗವಾಗಿ ಸಾವಿರಾರು ಭಕ್ತಾಧಿಗಳು ಜಟಕ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳಾಗದವರು ಹಾಗೂ ಸಂಕಷ್ಟ ನಿವಾರಣೆಗೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ಶೇಡಬರಿ ಮರ ಏರಿ ಒಂದು ಸುತ್ತು ತಿರುಗಿಸಿ ಹರಕೆಯನ್ನು ಒಪ್ಪಿಸುವುದು ಇಲ್ಲಿನ ವಿಶಿಷ್ಟ ಆಚರಣೆ. ಈ ಹಿನ್ನೆಲೆ ಇಡೀ ದಿನ ಭಕ್ತರು ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಸಮರ್ಪಿಸಿದರು. ಸುಮಾರು 100 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ದೇವಸ್ಥಾನದ ಜಾತ್ರೆಗೆ ಅನೇಕ ವೈಶಿಷ್ಟ್ಯಗಳಿವೆ.