newsics.com
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಅವರ ಆತ್ಮೀಯರು, ಕುಟುಂಬದವರು ಭೇಟಿ ಆಗಿದ್ದಾರೆ. ಭೇಟಿ ಆದವರೆಲ್ಲ ಬಹುತೇಕರು ದರ್ಶನ್, ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಘಟನೆ ನಡೆದಿರುವ ಬಗ್ಗೆ ಅವರಿಗೆ ಬೇಸರವಿದೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ದರ್ಶನ್ ಅನ್ನು ಈ ಹಿಂದೆ ಅದೇ ಜೈಲಿನಲ್ಲಿ ನೋಡಿದ್ದ ಅಧಿಕಾರಿಯೊಬ್ಬರು ಬೇರೆಯದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಈ ಹಿಂದೆಯೂ ಸಹ ದರ್ಶನ್ ತಪ್ಪು ಮಾಡಿ ಜೈಲು ಸೇರಿದ್ದರು, ಆಗ ಪಶ್ಚಾತ್ತಾಪ ಪಡುತ್ತಿರುವುದಾಗಿಯೂ ಹೇಳಿದ್ದರು. ಆದರೆ ಅವರಲ್ಲಿ ವರ್ತನೆಯಲ್ಲಿ, ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ಇದು ಎರಡನೇ ಬಾರಿ. 2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೈಲು ಸೇರಿದ್ದರು. ಆಗ ಸುಮಾರು ಒಂದು ತಿಂಗಳ ಕಾಲ ದರ್ಶನ್ ಜೈಲಿನಲ್ಲಿದ್ದರು. ಆಗ ಜೈಲಧಿಕಾರಿ ಆಗಿದ್ದ ಸತೀಶ್ ಅವರ ಬಳಿ ಮಾತನಾಡಿದ್ದ ದರ್ಶನ್, ‘ಆಗ ಹೆಂಡತಿ ಬಳಿ ಕ್ಷಮೆ ಕೇಳ್ತೀನಿ, ಮತ್ತೆಂದೂ ಹೀಗೆ ಮಾಡುವುದಿಲ್ಲಇನ್ಮುಂದೆ ಇಂತಹ ತಪ್ಪು ಮಾಡಲ್ಲ’ ಎಂದಿದ್ದರಂತೆ. ಆದರೆ ದರ್ಶನ್ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ನಿವೃತ್ತ ಜೈಲಧಿಕಾರಿ ಸತೀಶ್ ಗುರುತಿಸಿದ್ದಾರೆ