newsics.com
ಗೋಕಾಕನಲ್ಲಿ 10 ವರ್ಷಗಳ ಬಳಿಕ ನಡೆಯುತ್ತಿರುವ ಕರದಂಟು ನಾಡು ಗೋಕಾಕದ ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆ. ಕಳೆದ ಜೂ.30 ರಿಂದ ಆರಂಭವಾಗಿರುವ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿದೆ. ಎಲ್ಲಿ ನೋಡಿದ್ರು ಜನವೋ ಜನ. ಎತ್ತ ನೋಡಿದ್ರು ಅತ್ತ ಜನಸಾಗರ. ತೇರು ಬೀದಿಯಲ್ಲಿ ಸಾಗರೋಪಾದಿಯಲ್ಲಿ ಸೇರಿದ ಭಕ್ತ ಸಮೂಹ. ಗೋಕಾಕನಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಭಕ್ತ ಸಾಗರವೇ ಹರಿದು ಬಂದಿತು.
ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಅದ್ದೂರಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಮಂಗಳವಾರ ಜಾತ್ರೆಗೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಈವರೆಗೆ 10ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿರುವುದು ದಾಖಲೆಯೇ ಸರಿ.
ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಇಲ್ಲಿನ ಲಕ್ಷ್ಮೀ ದೇವಿ ಮಂದಿರ ಝಗಮಗಿಸುತ್ತಿದೆ. ತರಹೇವಾರಿ ಹೂಗಳಿಂದ ಹಾಗೂ ವಿದ್ಯುತ್ ದೀಪದಿಂದ ಸಿಂಗಾರಗೊಂಡಿರುವ ದೇವಿಯನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ. ಒಂಬತ್ತು ದಿನಗಳ ಕಾಲ ಗ್ರಾಮದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಮುಖ್ಯವಾಗಿ ದೇವಿಯನ್ನು ತೇರಿನಲ್ಲಿ ಕೂರಿಸಿ ಮುಖ್ಯ ಓಣಿಗಳಲ್ಲಿ ಒಟ್ಟಾಗಿ ಸಾಗಿದ್ದು ವಿಶೇಷವಾಗಿತ್ತು.
ವಿಶ್ವಕರ್ಮ ಶಿಲ್ಪಿಗಳಿಂದ 9 ತಿಂಗಳ ಕಾಲ ಈ ಎರಡು ರಥಗಳನ್ನು ಕೆತ್ತಲಾಗಿದೆ. ರಥ ತಲಾ 15 ಟನ್ ತೂಕವಿದ್ದು, ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಈ ರಥಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೇಶ್ವದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಬಾಶಿಯ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಪುತ್ರ ಲಕ್ಷ್ಮೀ ನಾರಾಯಾಣ ಆಚಾರ್ಯ ಅವರು ಈ ರಥಗಳನ್ನು ನಿರ್ಮಿಸಿದ್ದಾರೆ. ರಥ ನಿರ್ಮಾಣದಲ್ಲಿ ಒಟ್ಟು 46 ಜನ ಶಿಲ್ಪಿಗಳ ಕೆಲಸ ಮಾಡಿದ್ದು, ಈ ಜೋಡು ರಥೋತ್ಸವ ಅದ್ಧೂರಿಯಾಗಿ ಜರುಗಿತು. ರಥಗಳನ್ನು ಸಂಪೂರ್ಣ ಅಲಂಕರಿಸಲಾಗಿತ್ತು. ಬಂಗಾರ ಲೇಪಿನ ನೋಡುಗರನ್ನು ಆಕರ್ಷಿಸಿತು.
ಗೋಕಾಕ್ ಜಾತ್ರೆ ಭಂಡಾರದ ಜಾತ್ರೆ ಅಂತಾನೆ ಪ್ರಖ್ಯಾತಿ ಪಡೆದಿದೆ. ಭಂಡಾರದಲ್ಲಿ ಲಕ್ಷಾಂತರ ಭಕ್ತರು ಮಿಂದೆದ್ದರು. ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು, ಯುವಕ-ಯುವತಿಯರು ಪರಸ್ಪರ ಭಂಡಾರ ಹಚ್ಚಿ ಸಂಭ್ರಮಿಸಿದರು. ಇಡೀ ಗೋಕಾಕ್ ನಗರ ಹಳದಿಮಯ ಆಗಿತ್ತು.