newsics.com
ನವದೆಹಲಿ: ಮನೆ ಕೆಲಸದವನೇ ಮಹಿಳೆ ಹಾಗೂ ಆಕೆಯ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ.
ಕೆಲಸದವನಿಗೆ ರುಚಿಕಾ ಸೇವಾನಿ ಗದರಿಸಿದ್ದರಿಂದ ಕೋಪಗೊಂಡು ಇಬ್ಬರ ಕತ್ತು ಸೀಳಿ ಪರಾರಿಯಾಗಿದ್ದಾನೆ. ಬುಧವಾರ ರಾತ್ರಿ 9.30ರ ಸುಮಾರಿಗೆ ರುಚಿಕಾ ಅವರ ಪತಿ ಕುಲದೀಪ್ ಕೆಲಸದಿಂದ ಹಿಂದಿರುಗಿದಾಗ ಬಾಗಿಲು ಲಾಕ್ ಆಗಿತ್ತು. ಪತ್ನಿ ಹಾಗೂ ಮಗನಿಗೆ ಕರೆ ಮಾಡಿದ್ದಾರೆ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. ಕುಲದೀಪ್ ಸೇವಾನಿ ಗೇಟ್ ಬಳಿ ಮತ್ತು ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳನ್ನು ಸಹ ನೋಡಿ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಲಜಪತ್ ನಗರ ಮಾರ್ಕೆಟ್ನಲ್ಲಿ ಕುಲದೀಪ್, ರುಚಿಕಾ ದಂಪತಿ ಬಟ್ಟೆ ಅಂಗಡಿ ಹೊಂದಿದ್ದರು. ಕುಲದೀಪ್- ರುಚಿಕಾ ಮನೆಯಲ್ಲಿ ಮನೆ ಕೆಲಸ, ಕಾರ್ ಡ್ರೈವರ್ ಆಗಿ ಮುಖೇಶ್ ಕೆಲಸ ಮಾಡುತ್ತಿದ್ದ. ಲಜಪತ್ ನಗರ ಪಕ್ಕದ ಅಮರ್ ಕಾಲೋನಿಯಲ್ಲಿ ವಾಸವಿದ್ದ. ಮನೆ ಕೆಲಸದ ವಿಷಯಕ್ಕೆ ಬೈದ್ದಿದ್ದಕ್ಕಾಗಿ ಕೋಪಗೊಂಡು ಕುತ್ತಿಗೆ ಸೀಳಿದ್ದಾನೆ.
ಕೃತ್ಯ ನಡೆಸಿದ ಬಳಿಕ ಸಿಟಿ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಮುಖೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಏರಿಯಾದ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ, ಹೆಚ್ಚಿನ ತನಿಖೆಯನ್ನು ಲಜಪತ್ ನಗರ ಪೊಲೀಸರು ನಡೆಸುತ್ತಿದ್ದಾರೆ.