newsics.com
ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ ಯುಗಾದಿ. ಹೀಗಾಗಿ ಯುಗಾದಿಯಂದು ಬೇವು ಬೆಲ್ಲ ಸವಿದು ಜೀವನದ ಸುಖ ದುಃಖಗಳನ್ನು ಸಮನಾಗಿ ಕಾಣುವಂತೆ ಸಾಂಕೇತಿಕವಾಗಿ ಈ ಹಬ್ಬದ ಆಚರಣೆ ಅನಾದಿಕಾಲದಿಂದಲೂ ಇದೆ. ಈಗ ಮತ್ತೆ ಯುಗಾದಿ ಬಂದಿದೆ. ವಿಶ್ವಾವಸು ಸಂವತ್ಸರ ಯಾವ ರಾಶಿಯವರಿಗೆ ಯಾವ ರೀತಿಯ ಶುಭಾಶುಭ ಫಲ ನೀಡಲಿದೆ ಎಂಬ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಒಳಿತಾಗಲಿ. ಯುಗಾದಿ ಶುಭ ತರಲಿ.

—
ಮೇಷ
ಸಾಡೇಸಾತ್ ಶನಿ ಆರಂಭವಾಗುತ್ತದೆ. ಖರ್ಚಿನ ಪ್ರಮಾಣ ಜಾಸ್ತಿಯಾಗುತ್ತದೆ. ಇದನ್ನೇ ನಷ್ಟ ಅಂತಲೂ ಕರೆಯಬಹುದು. ಮನೆ, ಸೈಟು ಖರೀದಿ ಇಂಥದ್ದನ್ನು ಮಾಡುವಾಗ ಕಾನೂನು- ಕಾಗದ ಪತ್ರದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಲೇಬೇಕು. ನಿಮ್ಮ ಸಾಮರ್ಥ್ಯಕ್ಕೆ ಮೀರಿದಂಥದ್ದನ್ನು ಆಸೆಪಡಬೇಡಿ. ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಯಾವ ಕಾರಣಕ್ಕೂ ಬೇಡ. ತುಂಬ ಆಪ್ತರಾದವರು ಶತ್ರುಗಳಾಗುವ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಉದ್ಯೋಗ- ವೃತ್ತಿಯಲ್ಲಿ ಹಿನ್ನಡೆಯಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆಯಾಗಲಿದೆ.
—
ವೃಷಭ
ಉದ್ಯೋಗ ಬದಲಾವಣೆಗೆ ಉತ್ತಮವಾದ ಸಮಯ. ಮನೆ-ಸೈಟು- ಕಾರು ಖರೀದಿ, ಫಾರ್ಮ್ ಹೌಸ್, ಕೃಷಿ ಜಮೀನು ಖರೀದಿ ಮಾಡಬೇಕು ಎಂದುಕೊಳ್ಳುವವರಿಗೆ ಉದ್ದೇಶ ಈಡೇರಲಿದೆ. ಸಂಸಾರದಲ್ಲಿ ಸಂತೋಷ ಇರುತ್ತದೆ. ವಿವಾಹ ವಯಸ್ಕರಾಗಿದ್ದು, ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಕಂಕಣಬಲ ಕೂಡಿಬರಲಿದೆ. ವ್ಯವಹಾರದಲ್ಲಿ ಆದಾಯ ಹಾಗೂ ಲಾಭದ ಪ್ರಮಾಣ ಹೆಚ್ಚಾಗಲಿದೆ. ಬಡ್ತಿ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಒಟ್ಟಿನಲ್ಲಿ ಈ ವರ್ಷ ನಾನಾ ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ.
—
ಮಿಥುನ
ಉದ್ಯೋಗ- ವೃತ್ತಿ- ವ್ಯವಹಾರಗಳಲ್ಲಿ ನಾನಾ ರೀತಿಯ ಅಡಚಣೆ- ಕಿರಿಕಿರಿ ಅನುಭವಿಸಲಿದ್ದೀರಿ. ನಿಮಗೆ ಬಹಳ ಆಪ್ತರಾದವರ ಅಗಲಿಕೆಯಿಂದ ಭಾವನಾತ್ಮಕವಾಗಿ ಕುಗ್ಗುವಂತಾಗುತ್ತದೆ. ಖರ್ಚು- ವೆಚ್ಚದ ವಿಚಾರದಲ್ಲಿ ನೀವು ಹಾಕಿಕೊಂಡ ಬಜೆಟ್ ಮೀರಿ ಹೋಗಲಿದೆ. ವಿವಾಹ, ದಾಂಪತ್ಯ, ಆರೋಗ್ಯ, ಮಕ್ಕಳು, ತಂದೆ ಆರೋಗ್ಯ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದುಃಖ ಅನುಭವಿಸಬೇಕಾಗುತ್ತದೆ. ಷೇರು ಮಾರುಕಟ್ಟೆ, ಜೂಜು, ಲಾಟರಿ ಇಂಥವುಗಳಿಂದ ಕಡ್ಡಾಯವಾಗಿ ದೂರ ಇರುವುದು ಒಳ್ಳೆಯದು. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ವರ್ಚಸ್ಸಿಗೆ ಹಾನಿಯಾಗಲಿದೆ.
—
ಕರ್ಕಾಟಕ
ತಂದೆಯೊಂದಿಗೆ ಮನಸ್ತಾಪ, ಭಿನ್ನಾಭಿಪ್ರಾಯ ಏರ್ಪಡಬಹುದು. ಅವರ ಆರೋಗ್ಯ ವಿಚಾರಕ್ಕೋ ಅಥವಾ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಪರೀತ ಒತ್ತಡ ಸೃಷ್ಟಿಯಾಗಲಿದೆ. ವಿವಾಹಿತರಾಗಿದ್ದಲ್ಲಿ ದಂಪತಿ ಮಧ್ಯೆ ಮೂರನೇ ವ್ಯಕ್ತಿಯ ಕಾರಣಕ್ಕಾಗಿ ಅಭಿಪ್ರಾಯ ಭೇದ, ಜಗಳ- ಕಲಹಗಳು ಆಗಬಹುದು. ಒಂದೇ ಕೆಲಸಕ್ಕೆ ಹಲವು ಬಾರಿ ಪ್ರಯತ್ನಿಸಬೇಕಾಗುತ್ತದೆ. ವಿಲಾಸಿ ವಸ್ತುಗಳ ಖರೀದಿಗಾಗಿ ಹೆಚ್ಚಿನ ಸಾಲವನ್ನು ಮಾಡುವಂತಾಗುತ್ತದೆ. ನಿಮ್ಮದಲ್ಲದ ವ್ಯವಹಾರ, ವಿಚಾರಗಳಿಗೆ ತಲೆ ಹಾಕಲು ಹೋಗಬೇಡಿ. ಪಾರ್ಟನರ್ಷಿಪ್ ವ್ಯವಹಾರ ಮಾಡುತ್ತಿರುವವರ ಮಧ್ಯೆ ವಿರಸ ಏರ್ಪಡುತ್ತದೆ.
—
ಸಿಂಹ
ಅಷ್ಟಮ ಶನಿಯ ಪ್ರಭಾವ ತೀಕ್ಷ್ಣವಾಗಿರುತ್ತದೆ. ಉದ್ಯೋಗ ಸ್ಥಳ, ವ್ಯವಹಾರಗಳಲ್ಲಿ, ಸಾಂಸಾರಿಕ ವಿಚಾರಗಳಲ್ಲಿ ಹೀಗೆ ನಾನಾ ಬಗೆಯಲ್ಲಿ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ವೈದ್ಯಕೀಯ ವೆಚ್ಚವು ಸಿಕ್ಕಾಪಟ್ಟೆ ಹೆಚ್ಚಾಗುತ್ತದೆ. ಹೊಟ್ಟೆ, ನರ, ಜೀರ್ಣಕ್ರಿಯೆಯ ಅಂಗಗಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ತೀವ್ರವಾಗಿ ಕಾಡಲಿವೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ನಾನಾ ಅಡೆತಡೆಗಳು ಎದುರಾಗಲಿವೆ. ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದಾದಲ್ಲಿ ಏನಾದರೊಂದು ಕಾರಣದಿಂದ ಮದುವೆ ಮುರಿದು ಬೀಳುವ ಸಾಧ್ಯತೆಯಿದೆ. ಮಾನಸಿಕ ಖಿನ್ನತೆ ಎದುರಿಸುತ್ತಿರುವವರು ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆಯಿರಿ.
—
ಕನ್ಯಾ
ದಂಪತಿ ಮಧ್ಯೆ ವಿರಸ- ಕಲಹಗಳು ಏರ್ಪಡುತ್ತವೆ. ಹೊಸಬರ ಜತೆಗಿನ ವ್ಯವಹಾರದಲ್ಲಿ ನಷ್ಟ ಅನುಭವಿಸುವಂತಾಗಲಿದೆ. ವಿದೇಶದಲ್ಲಿ ವ್ಯಾಸಂಗ, ಉದ್ಯೋಗ ಮಾಡುವುದಕ್ಕಾಗಿ ತೆರಳಬೇಕು ಎಂದುಕೊಂಡಿರುವವರಿಗೆ ನಾನಾ ಅಡಚಣೆಗಳು ಆಗಬಹುದು. ಒಂದು ವೇಳೆ ಈಗಾಗಲೇ ವಿದೇಶದಲ್ಲಿ ಇದ್ದೀರಿ ಅಂತಾದಲ್ಲಿ ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗುತ್ತದೆ. ಸಾಲ ಮಾಡಿಯಾದರೂ ನಿಮ್ಮಲ್ಲಿ ಹಲವರು ಸೈಟು- ಜಮೀನು ಖರೀದಿ ಮಾಡುವ ಯೋಗ ಇದೆ. ಮನೆದೇವರ ಪೂಜೆ, ದೇವರ ಹರಕೆ ಇತ್ಯಾದಿಗಳನ್ನು ಈ ಸಂವತ್ಸರದಲ್ಲಿ ಹೆಚ್ಚಾಗಿ ಮಾಡಲಿದ್ದೀರಿ.
—
ತುಲಾ
ಹಲವು ವಿಧದಲ್ಲಿ ಆದಾಯದ ಮೂಲವನ್ನು ಮಾಡಿಕೊಳ್ಳಲಿಳದ್ದೀರಿ. ಶತ್ರುಗಳ ನಾಶ ಆಗಲಿದೆ. ಕೋರ್ಟ್- ಕಚೇರಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇನ್ನು ದೀರ್ಘಕಾಲದಲ್ಲಿ ಹೆಸರು ಉಳಿಯುವಂತೆ ದೇವಸ್ಥಾನದಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡಿಸುವ ಯೋಗ ಇರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸಮಸ್ಯೆಗಳು ಇದ್ದಲ್ಲಿ ನಿವಾರಣೆ ಆಗಲಿದೆ. ಆದರೆ ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ, ಉದ್ಯೋಗದ ವಿಚಾರದಲ್ಲಿ ಚಿಂತೆ ಕಾಡಲಿದೆ. ದಂಪತಿ ಮಧ್ಯೆ ಹಲವು ವಿಚಾರಗಳಿಗೆ ಮನಸ್ತಾಪಗಳುಂಟಾಗಲಿವೆ.
—
ವೃಶ್ಚಿಕ
ಈ ಹಿಂದೆ ನಿಮ್ಮಿಂದ ಆದ ತಪ್ಪುಗಳಿಗೆ ಈಗ ಶಿಕ್ಷೆ ಅನುಭವಿಸುವಂತೆ ಆಗುತ್ತದೆ. ನೀವೇ ಬಾಯಿಬಿಟ್ಟು ಹೇಳಿ, ಕೆಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲಿದ್ದೀರಿ. ಮಕ್ಕಳ ಸಲುವಾಗಿ ನಾನಾ ರೀತಿಯಲ್ಲಿ ಚಿಂತೆಗಳು ನಿಮ್ಮನ್ನು ಕಾಡಲಿವೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸವಾಲಿನ ಸಮಯವಾಗಿರುತ್ತದೆ. ನಿಮ್ಮಲ್ಲಿ ಹಲವರು ಪೊಲೀಸ್ ಠಾಣೆ, ಕೋರ್ಟ್-ಕಚೇರಿ ಮೆಟ್ಟಿಲೇರುವಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಉದ್ಯೋಗದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲಿದ್ದೀರಿ. ಇದರ ಪರಿಣಾಮವಾಗಿ ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಹಲವು ಸಮಸ್ಯೆಗಳು ಎದುರಾಗಲಿವೆ.
—
ಧನುಸ್ಸು
ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯ ಸ್ಥಿತಿ ಆತಂಕಕ್ಕೆ ಕಾರಣವಾಗಲಿದೆ. ನಿಮ್ಮ ಮಾತಿನ ಮೂಲಕವಾಗಿ ಹಲವರ ವಿರೋಧ ಮಾಡಿಕೊಳ್ಳಲಿದ್ದೀರಿ. ಭೂಮಿ ಮಾರಾಟಕ್ಕೆ ಇಟ್ಟವರಿಗೆ ಉತ್ತಮ ಬೆಲೆ ದೊರೆಯಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರಿಗೆ ಹಣಕಾಸಿನ ಹರಿವು ಸಾಮಾನ್ಯ ಎಂಬಂತೆ ಇರುತ್ತದೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ. ಮರೆವಿನ ಸಮಸ್ಯೆಯಿಂದ ಬಳಲುತ್ತಿರುವ ತಂದೆ- ತಾಯಿ ಇದ್ದಲ್ಲಿ ಅವರ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ.
—
ಮಕರ
ಸೋದರ- ಸೋದರಿಯರ ಜತೆ ಮನಸ್ತಾಪ- ಆಸ್ತಿ ವ್ಯಾಜ್ಯ ಇತ್ಯಾದಿಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಬೇಕಾದಂಥ ವೇದಿಕೆ ಸಿದ್ಧವಾಗಲಿದೆ. ವಿವಾಹಿತರು ಸಂಗಾತಿ ಜತೆ ವಿನಾಕಾರಣ ಜಗಳ- ಕಲಹಗಳನ್ನು ಮಾಡಿಕೊಳ್ಳುತ್ತೀರಿ. ಆದಾಯ ಮೂಲಗಳು ಹೆಚ್ಚುತ್ತವೆ. ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬಹಳ ಮುಖ್ಯ. ನೀವು ಬಹಳ ಗೌರವಿಸುವ, ನಂಬುವ ವ್ಯಕ್ತಿಗಳಿಂದಲೇ ವಂಚನೆ ಆಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ಆದಾಯವನ್ನು ಕೂಡಿಡುವ, ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಿ.
—
ಕುಂಭ
ವಿಪರೀತ ಉತ್ಸಾಹ ತೋರಿಸುವುದರಿಂದ ನಾನಾ ಬಗೆಯಲ್ಲಿ ಚಿಂತೆ- ದುಃಖವನ್ನು ಅನುಭವಿಸಬೇಕಾಗುತ್ತದೆ. ಆಮೇಲೆ ಮಾಡಿದರಾಯಿತು, ಆಮೇಲೆ ನೋಡಿದರಾಯಿತು ಎಂಬ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ನಿಮ್ಮಲ್ಲಿ ಕೆಲವರಿಗೆ ವಿವಾಹದ ಆಚೆಗಿನ ಸೆಳೆತದಿಂದಾಗಿ ಸಮಸ್ಯೆಗಳಾಗಲಿವೆ. ಹಳೇ ಪ್ರೇಮ ಪ್ರಕರಣಗಳು ಮರುಕಳಿಸದಂತೆ ಜಾಗ್ರತೆ ವಹಿಸಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡಿರುವವರಿಗೆ ಉತ್ತಮ ಸಮಯವಾಗಿರುತ್ತದೆ. ಅದೇ ರೀತಿ ವ್ಯಾಪಾರ- ವ್ಯವಹಾರದಲ್ಲಿ ಇರುವವರಿಗೆ ಸಹ ಆದಾಯ ಹೆಚ್ಚಳವಿದೆ. ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್ ಇತ್ಯಾದಿ ಸಮಸ್ಯೆಗಳು ಕಾಡಲಿವೆ.
—
ಮೀನ
ನಿಮ್ಮ ಹೆಸರನ್ನು ಕೈಯಾರೆ ಹಾಳು ಮಾಡಿಕೊಳ್ಳುವಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ. ಅನಾರೋಗ್ಯ ಸಮಸ್ಯೆಗಳಿಗೆ ಸ್ವಯಂ ವೈದ್ಯ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಸಟ್ಟಾ ವ್ಯವಹಾರದಲ್ಲಿ ಹಣ ತೊಡಗಿಸುವುದು, ಷೇರು ಮಾರುಕಟ್ಟೆ ವ್ಯವಹಾರ ಇಂಥವನ್ನೆಲ್ಲ ಖಡಾಖಂಡಿತವಾಗಿ ಮಾಡುವುದಕ್ಕೆ ಹೋಗಬೇಡಿ. ಸ್ನೇಹಿತರ ಜತೆ ವ್ಯವಹರಿಸುವಾಗ ಮಾತಿನ ಮೇಲೆ ನಿಗಾ ಇರಲಿ. ಬಳಸುವ ಪದಗಳ ಕಡೆಗೆ ಲಕ್ಷ್ಯ ನೀಡಿ. ಧಾರ್ಮಿಕ ಕ್ಷೇತ್ರದಲ್ಲಿ ಇರುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗವಿದೆ. ತೀರ್ಥಕ್ಷೇತ್ರ ಪ್ರವಾಸ, ಹೋಮ- ಹವನಾದಿಗಳಲ್ಲಿ ಪಾಲ್ಗೊಳ್ಳಲಿದ್ದೀರಿ.
—
ಪರಿಹಾರಗಳು
ಮೇಷ, ಸಿಂಹ, ವೃಶ್ಚಿಕ, ಧನು, ಮೀನ ರಾಶಿಯವರು ಶನಿ ಗ್ರಹದ ಶಾಂತಿ ಮಾಡಿಸುವುದು ಉತ್ತಮ. ಮಿಥುನ, ಕರ್ಕಾಟಕ, ವೃಶ್ಚಿಕ ರಾಶಿಯವರು ಗುರು ಗ್ರಹದ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಸಿಂಹ ರಾಶಿಯವರು ನವಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುವುದಕ್ಕೆ ಅನುಕೂಲ ಇದ್ದಲ್ಲಿ ಅದನ್ನೇ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ವಿಷ್ಣು ಸಹಸ್ರನಾಮ ಪಠಣ, ಶ್ರವಣವಾದರೂ ಆಗಲಿ.