newsics.com
ಬೆಂಗಳೂರು : ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣಗೊಳಿಸಿದರು.
ವಿಶೇಷ ಪೂಜೆ ಮೂಲಕ ಇಂದು (ಜನವರಿ 27) 43.6 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಲಾಗಿದ್ದು, ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್ ಹಾಗೂ ಸಚಿವರು, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಂಚಿನ ಪ್ರತಿಮೆಯನ್ನು ಶಿಲ್ಪಿ ಶ್ರೀಧರ್ ಮೂರ್ತಿ ಅವರು ನಿರ್ಮಾಣ ಮಾಡಿದ್ದು, ಈ ಮೂರ್ತಿ ನಿರ್ಮಾಣಕ್ಕೆ ಬರೋಬ್ಬರಿ 12 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ನೂರಾರು ಶಿಲ್ಪಿಗಳು, ತಂತ್ರಜ್ಞರು, ಕಲಾವಿದರು ಮೂರ್ತಿ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಬರೋಬ್ಬರಿ 21.24 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ರಾಜ್ಯದ ಲಾಂಛನ ಗಂಡ ಭೇರುಂಡ, ಮೈಸೂರು ಲಾಂಛನ ಹಾರದಲ್ಲಿ ಕೆತ್ತನೆ ಮಾಡಲಾಗಿದೆ. ಚಾಲುಕ್ಯರು ಹಾಗೂ ಹೊಯ್ಸಳ ಶೈಲಿಯ ಸಮ್ಮಿಶ್ರ ರೂಪದಲ್ಲಿ ನಾಡದೇವಿ ಪ್ರತಿಮೆ ಇದ್ದು , ಪೀಠ ಮತ್ತು ಹಿಂಬದಿ ಕರ್ನಾಟಕ ನಕ್ಷೆ, ಉಬ್ಬುಶಿಲ್ಪವನ್ನು ಕಲಾಕೃತಿ ಒಳಗೊಂಡಿದೆ. ಮೂರ್ತಿ ಚಾಲುಕ್ಯ, ಆಭರಣಗಳು ಹೊಯ್ಸಳರ ಶೈಲಿಯಲ್ಲಿದೆ. ಮುಕುಟದಲ್ಲಿ ಮಯೂರ ಧ್ವಜ, ನವರತ್ನಗಳ ಜಡೆ, ಮಂಗಳೂರು ಮಲ್ಲಿಗೆಯಿಂದ ಅಲಂಕೃತ ತುರುಬು, ಎರಡು ಕಿವಿಗಳ ಕೆಳಗೆ ಮಕರ ತೋರಣ, ಕಂಠಿಹಾರ ದಲ್ಲಿ ಗಂಡಭೇರುಂಡ ಕೆತ್ತನೆ, ಹೆಗಲಿನಿಂದ ಕಾಲಿನವರೆಗೆ ವೈಜಯಂತಿ ಮಾಲೆ, ಹೊಯ್ಸಳರ ಶೈಲಿನ ಕಾಲುಗಳುಳ್ಳ ಸಿಂಹಾಸನದ ಮೇಲೆ ತಾಯಿ ವಿರಾಜಮಾನವಾಗಿದ್ದಾಳೆ