newsics.com
ಕರಾಚಿ(ಪಾಕಿಸ್ತಾನ): ಮೇವು ಅರಸಿ ಜಮೀನಿಗೆ ಪ್ರವೇಶಿಸಿದ್ದ ಒಂಟೆಯ ಕಾಲನ್ನೇ ಭೂಮಾಲೀಕ ಕತ್ತರಿಸಿರುವ ಹೀನ ಕೃತ್ಯ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಭೂಮಾಲೀಕನ ಕೆಟ್ಟ ಬುದ್ಧಿ ಹಿಂದೆ ಕಾಲು ಕಳೆದುಕೊಂಡಿರುವ ನತದೃಷ್ಟ ಒಂಟೆಗೆ ದುಬೈನಿಂದ ಕೃತಕ ಕಾಲು ತರಿಸಿ ಜೋಡಿಸಲು ಕ್ರಮ ವಹಿಸಲಾಗಿದೆ. ಘಟನೆ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿಂಧ್ ಪ್ರಾಂತ್ಯದ ಮುಂದ್ ಜಾಮ್ರಾವೊ ಗ್ರಾಮದಲ್ಲಿ ನಡೆದಿರುವ ಈ ಕೃತ್ಯವು ಪ್ರಾಂತ್ಯದ ಪ್ರಮುಖ ರಾಜಕೀಯ ನಾಯಕರ ಗಮನವನ್ನು ಸೆಳೆದಿದ್ದು. ಸದ್ಯ ಒಂಟೆಯ ಕಾಲು ಕತ್ತರಿಸಿರುವ ಭೂಮಾಲೀಕ ಹಾಗೂ ಆತನ ಐವರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ.
ಹಸಿವಿನಿಂದ ಆಹಾರಕ್ಕಾಗಿ ಬಂದ ಒಂಟೆಯ ಮುಂಭಾಗದ ಬಲಗಾಲನ್ನು ಕತ್ತರಿಸಿದ್ದ ಭೂಮಾಲೀಕ ರುಸ್ತುಮ್ ಶಾರ್ ಮತ್ತು ಆತನ ಐವರು ನೌಕರರು, ತಮ್ಮ ಕೃತ್ಯವನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಲ್ಲದೆ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಒಂಟೆಯನ್ನು ಸಾಕಿಕೊಂಡಿದ್ದ ಸೂಮರ್ ಬೆಹನ್ ಎಂಬಾತ ಈ ಕೃತ್ಯದ ಕುರಿತು ಯಾವುದೇ ದೂರು ದಾಖಲಿಸಿಲ್ಲ. ಆದರೆ, ಕೃತ್ಯ ಬಯಲಾಗುತ್ತಿದ್ದಂತೆ ಅಧಿಕಾರಿಗಳೇ ಆತನನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ವಿಭಾಗದ ಕಾರ್ಯದರ್ಶಿ ಕಾಜೀಂ ಜಾಟೊ ಒಂಟೆಯನ್ನು ಸದ್ಯ ಕರಾಚಿಯಲ್ಲಿನ ಪ್ರಾಣಿ ಆರೈಕೆ ಶಿಬಿರಕ್ಕೆ ಸಾಗಿಸಲಾಗಿದ್ದು, ‘ದುಬೈನಿಂದ ಕೃತಕ ಕಾಲು ತರಿಸಲು ವ್ಯವಸ್ಥೆ ಮಾಡಲಾಗಿದೆ, ಕಾಲು ಸಿಕ್ಕಾಕ್ಷಣ ಜೋಡಿಸಲಾಗುವುದು ಎಂದು ಹೇಳಿದ್ದಾರೆ.