newsics.com
ಮೈಸೂರು: ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಡೆಸುತ್ತಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರ ವಿಚಾರಣೆ ನಡೆಸಿದರು. ಮುಡಾ ಹಗರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ 3ನೇ ಆರೋಪಿಯಾಗಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಕೆಸರೆ ಗ್ರಾಮದಲ್ಲಿರುವ 3.16 ಎಕರೆ ಜಮೀನಿನ ಕುರಿತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಮಾಹಿತಿ ಪಡೆದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ದೇವರಾಜು ಎಂಬುವವರಿಂದ ಸೈಟ್ ಖರೀದಿಸಿದ್ದ ಮಲ್ಲಿಕಾರ್ಜುನ ಅವರು ತಮ್ಮ ತಂಗಿ ಪಾರ್ವತಿ (ಸಿಎಂ ಪತ್ನಿ) ಅವರಿಗೆ ಅರಿಶಿಣ ಕುಂಕುಮಕ್ಕೆಂದು 3.16 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು.
ಈ ಜಮೀನಿನ ವ್ಯಾಜ್ಯ ಕುರಿತಾಗಿ, ಸೈಟ್ ಪಡೆದದ್ದು ಹೇಗೆ? ವಹಿವಾಟು ಮಾಡಿದ್ದು, ನಗದು ರೂಪದಲ್ಲಿ ವ್ಯವಹಾರ ಆಯ್ತಾ? ಯಾವ ಸ್ವರೂಪದಲ್ಲಿ ಖರೀದಿ ಮಾಡಿದ್ರು ಎಂಬಿತ್ಯಾದಿ ಹೇಳಿಕೆಯ ವಿವರಣೆಗಳನ್ನು ಇ.ಡಿ.ಅಧಿಕಾರಿಗಳು ಮಲ್ಲಿಕಾರ್ಜುಸ್ವಾಮಿ ಅವರಿಂದ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಜಮೀನಿನ ಮೂಲ ಮಾಲೀಕ ದೇವರಾಜು ಸೇರಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.