newsics.com
ಹಾಸನ: ಹೊಳೇನರಸೀಪುರದ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ಬೋಳಿಸುವಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ತಾಕೀತು ಮಾಡಿದ್ದು, ಇದಕ್ಕೆ ಒಪ್ಪದ ಮುಸ್ಲಿಂ ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಹೊಳೆನರಸೀಪುರದ ಸರ್ಕಾರಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ತಮಗೆ ಗಡ್ಡ ತೆಗೆಯುವಂತೆ ಮೌಖಿಕ ಸೂಚನೆ ನೀಡಿದೆ ಎಂದು ಮುಸ್ಲಿಂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆಡಳಿತ ಮಂಡಳಿ ತಮ್ಮ ಸಂಪ್ರದಾಯಕ್ಕೆ ವಿರುದ್ಧವಾದ ಆದೇಶವನ್ನು ನೀಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಗಡ್ಡ ತೆಗೆಯುವಂತೆ ಆಡಳಿತ ಮಂಡಳಿ ತಮಗೆ ಸೂಚನೆ ನೀಡಿದೆ ಎಂದು 13ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಟ್ವೀಟ್ ಮೂಲಕ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನ (Government Narsing College) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರವಾಗಿ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ.
ಪಿಎಂಎಸ್ಎಸ್ ಯೋಜನೆಯಡಿ ನರ್ಸಿಂಗ್ ಓದಲು ಜಮ್ಮು-ಕಾಶ್ಮೀರದಿಂದ 13ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಗಡ್ಡ ತೆಗೆದು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಆದರೆ, ಗಡ್ಡ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.
ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಗಡ್ಡ ತೆಗೆಯುವಂತೆ ಸೂಚನೆ ನೀಡಿದ್ದು, ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹಾಗೂ ಅಲ್ಲಿನ ಪ್ರಮುಖ ನಾಯಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಮುಂದೆಯೂ ಮೊರೆ ಇಟ್ಟಿದ್ದಾರೆ.

ಪ್ರಾಂಶುಪಾಲರು ಏನಂತಾರೆ?:
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲ ಚಂದ್ರಶೇಖರ್, ಗಡ್ಡ ತೆಗೆದು ಬನ್ನಿ ಎಂದಿದ್ದಕ್ಕೆ ಹೊಳೆನರಸೀಪುರ ನರ್ಸಿಂಗ್ ಕಾಲೇಜು ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಏಕೆ ಸೂಚನೆ ನೀಡಲಾಗಿತ್ತು ಎಂಬುದನ್ನು ತಿಳಿಸಿದ್ದಾರೆ.
ನರ್ಸಿಂಗ್ ಕೋರ್ಸ್ ಆಗಿರುವುದರಿಂದ ಕ್ಲಿನಿಕಲ್ ಲ್ಯಾಬ್ನಲ್ಲಿ ಗಡ್ಡ ಬಿಟ್ಟುಕೊಂಡು ಭಾಗವಹಿಸಿದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಹೇಳಿದ್ದೇವೆ. ಕೇವಲ ಮುಸ್ಲಿಂ ಯುವಕರಿಗೆ ಮಾತ್ರ ಗಡ್ಡ ತೆಗೆಯುವಂತೆ ಹೇಳಿಲ್ಲ ಎಂದು ಹೇಳಿದರು.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಜಮ್ಮು-ಕಾಶ್ಮೀರದ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಗಡ್ಡ ಬಿಟ್ಟುಕೊಂಡು, ಕೊಳೆಯಾದ ಬಟ್ಟೆ ತೊಟ್ಟುಕೊಂಡು ಬರುತ್ತಿದ್ದರು. ಶೂ ಬದಲು ಚಪ್ಪಲಿ ಹಾಕಿಕೊಂಡು ವಿಚಿತ್ರವಾಗಿ ಬರುತ್ತಿದ್ದರು ಎಂದು ಹೇಳಿದರು.
ಹೀಗಾಗಿ, ಕ್ಲಿನಿಕಲ್ ಇನ್ಸ್ಟ್ರಕ್ಟರ್ ವಿಜಯಕುಮಾರ್ ಈ 13 ವಿದ್ಯರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಗಡ್ಡ ತೆಗೆದು, ಚಪ್ಪಲಿ ಹಾಕಿಕೊಂಡು ಸರಿಯಾಗಿ ಬನ್ನಿ ಅಂತ ಮೂರು ದಿನ ಸೂಚನೆ ನೀಡಿದರೂ ವಿದ್ಯಾರ್ಥಿಗಳು ಮಾತು ಕೇಳುತ್ತಿರಲಿಲ್ಲ ಎಂದು ತಿಳಿಸಿದರು.
ನಮ್ಮ ಕಾಲೇಜಿನ ನಿಯಮದ ಪ್ರಕಾರ, ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಕ್ಲಿನಿಕಲ್ ಲ್ಯಾಬ್ಗೆ ಎಂಟು ಗಂಟೆಗೆ ಬರುವ ಬದಲು 10-11 ಗಂಟೆಗೆ ಬೇಕಾಬಿಟ್ಟಿ ಬರುತ್ತಿದ್ದರು. ಅಲ್ಲದೇ ವಿದ್ಯಾರ್ಥಿಗಳ ಹಾಜರಾತಿ ಈ ಕಡಿಮೆ ಇದೆ. ಇದೆಲ್ಲವನ್ನು ಪ್ರಶ್ನಿಸಿದಾಗ ಮತ್ತು ಗಡ್ಡ ತೆಗೆಯುವಂತೆ ಹೇಳಿದ್ದಕ್ಕೆ, ತಮ್ಮ ತಪ್ಪು ಮುಚ್ಚಿಕೊಳ್ಳಲು ವಿಷಯವನ್ನು ಬೇರೆ ತರ ತಿರುಚಿದ್ದಾರೆ. ಈ ವಿವಾದವನ್ನು ಸೃಷ್ಟಿಸಿದ್ದಾರೆ ಎಂದರು.
ಇನ್ನು, ಈ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದಂತೆ ಕಾಲೇಜಿಗೆ ಡಿವೈಎಸ್ಪಿ ಶಾಲೂ ಹಾಗೂ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಮುತಾಲಿಕ್ ಆಕ್ರೋಶ:
ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಇದು ಮುಸ್ಲಿಂ ವಿದ್ಯಾರ್ಥಿಗಳ ಉದ್ಧಟತನವಾಗಿದೆ. ನಿಯಮ ಪಾಲನೆ ಮಾಡದೆ ಇದ್ದರೆ ಸಸ್ಪೆಂಡ್ ಮಾಡಬೇಕು. ನಿಯಮ ಬಿಟ್ಟು ನಡೆದುಕೊಳ್ಳಲು ಇದು ಅಫ್ಘಾನ್, ಪಾಕಿಸ್ತಾನ ಅಲ್ಲ. ವಿದ್ಯಾರ್ಥಿಗಳು ಕಾಲೇಜಿನ ನಿಯಮದ ಪ್ರಕಾರ ನಡೆದುಕೊಳ್ಳಬೇಕು. ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪ್ರಭಾವ ಇದೆ ಎಂಬುದಕ್ಕೆ ದಾಖಲೆ ನೀಡಿದ ಸ್ನೇಹಮಯಿ ಕೃಷ್ಣ, ಸಿಎಂಗೆ ತಲೆನೋವು
ಇಂದು ಅಕ್ಷಯ ನವಮಿ: 3 ನಕ್ಷತ್ರಗಳ ಶುಭ ಸಂಯೋಗ, ಈ ಐದು ರಾಶಿಯವರಿಗೆ ಸುಯೋಗ
ಸಣಕಲು ಕಡ್ಡಿಯಂತಾದ ಸುನೀತಾ ವಿಲಿಯಮ್ಸ್; ಗಗನಯಾನಿ ಹೆಲ್ತ್ ಬಗ್ಗೆ ನಾಸಾ ಕಳವಳ!