newsics.com | ನ್ಯೂಸಿಕ್ಸ್
ಬೆಂಗಳೂರು: ರಾಜಧಾನಿಯ ಯೆಲ್ಲೋ ಲೈನ್ ಮೆಟ್ರೋ (Yellow Line Metro) ಮಾರ್ಗದಲ್ಲಿ ಪತ್ರಕರ್ತರೊಬ್ಬರು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಸ್ಕೂರ್ ರೋಡ್ ಮೆಟ್ರೋ ನಿಲ್ದಾಣದ (Huskur Road Metro Station) ಬಳಿ ನಡೆದಿದೆ.
ಉತ್ತರ ಕರ್ನಾಟಕದ ರಾಯಚೂರು ಮೂಲದವರಾದ ರಾಜೇಶ್ ಹಿರೇಮಠ್ (35) ಮೃತ ದುರ್ದೈವಿ. ಇವರು ಈ ಹಿಂದೆ ಜನಪ್ರಿಯ ‘ನ್ಯೂಸ್ ಫಸ್ಟ್’ ಪ್ರೈಮ್ ಯೂಟ್ಯೂಬ್ ಇಂಗ್ಲಿಷ್ ಚಾನೆಲ್ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಕೆಲವು ಮೂಲಗಳ ಪ್ರಕಾರ ಅವರು ಒಂದು ವರ್ಷದ ಹಿಂದಷ್ಟೇ ತಮ್ಮ ಕೆಲಸವನ್ನು ತೊರೆದಿದ್ದರು ಮತ್ತು ಇತ್ತೀಚಿನ ದಿನಗಳಲ್ಲಿ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಇಂದು ಸಂಜೆ ಸುಮಾರು 5:50ರ ಸುಮಾರಿಗೆ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ರಾಜೇಶ್ ಹಿರೇಮಠ್, ರೈಲು ಬರುತ್ತಿದ್ದಂತೆ ಏಕಾಏಕಿ ಹಳಿಗಳ ಮೇಲಕ್ಕೆ ಹಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ಕೂಡಲೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ದೊಡ್ಡ ಅನಾಹುತ ತಪ್ಪಿಸಲು ಯತ್ನಿಸಿದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹೆಬ್ಬಗೋಡಿ ಪೊಲೀಸರ ಸಹಕಾರದೊಂದಿಗೆ ಹಳಿಯಿಂದ ಮೇಲಕ್ಕೆತ್ತಿ, ತುರ್ತು ಚಿಕಿತ್ಸೆಗಾಗಿ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಆ ವೇಳೆಗಾಗಲೇ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Swiggy ಸ್ವಿಗ್ಗಿ ಕಿರುಕುಳಕ್ಕೆ ಹೈರಾಣಾದ ಹೋಟೆಲ್ ಮಾಲೀಕರು; ಬೆಂಗಳೂರಲ್ಲಿ ಸ್ವಿಗ್ಗಿ ಬಹಿಷ್ಕಾರದ ಎಚ್ಚರಿಕೆ