newsics.com | ನ್ಯೂಸಿಕ್ಸ್
ಮುಂಬೈ: ವೈದ್ಯಕೀಯ ಸೀಟು ಸಿಗಲಿಲ್ಲವೆಂಬ ತೀವ್ರ ನಿರಾಶೆಯಿಂದ ಕೇವಲ 11 ಅಂಕಗಳ ಅಂತರದಿಂದ ನೀಟ್ನಲ್ಲಿ ಹಿನ್ನಡೆ ಅನುಭವಿಸಿದ ಮಹಾರಾಷ್ಟ್ರದ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಆಷಾಢ ಏಕಾದಶಿಯ ನಿಮಿತ್ತ ಅಂಕಿತಾ ಅವರ ಪೋಷಕರು ಹಾಗೂ ಸಹೋದರ ಪಂಡರಪುರಕ್ಕೆ ಧಾರ್ಮಿಕ ಯಾತ್ರೆಗೆ ತೆರಳಿದ್ದರು. ಮನೆಯಲ್ಲಿ ಅಂಕಿತಾ ಒಂಟಿಯಾಗಿದ್ದ ವೇಳೆ, ಸಂಜೆ ಸುಮಾರು 5:30ರ ಸುಮಾರಿಗೆ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಈ ಕೃತ್ಯ ಎಸಗಿದ್ದಾರೆ. ಸಂಜೆ ಮನೆಗೆ ಬಂದ ಸಂಬಂಧಿಕರಿಗೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಂಕಿತಾ ಬರೆದಿದ್ದಾರೆನ್ನಲಾದ ಮರ್ಮಸ್ಪರ್ಶಿಯಾದ ಡೆತ್ನೋಟ್ ಲಭ್ಯವಾಗಿದೆ. ಅದರಲ್ಲಿ ಹೆತ್ತವರ ಬಳಿ ಕ್ಷಮೆ ಕೋರಿರುವ ಆಕೆ, “ಅಮ್ಮಾ-ಅಪ್ಪಾ, ನನಗಾಗಿ ನೀವು ಬಹಳಷ್ಟು ಶ್ರಮಪಟ್ಟಿದ್ದೀರಿ. ಆದರೆ ನಿಮ್ಮ ವೈದ್ಯೆಯಾಗುವ ಆಸೆಯನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಣ್ಣಾ, ದಯವಿಟ್ಟು ಹೆತ್ತವರನ್ನು ಚೆನ್ನಾಗಿ ನೋಡಿಕೋ. ನನ್ನಿಂದ ಏನಾದರೂ ತಪ್ಪುಗಳಾಗಿದ್ದರೆ ಕ್ಷಮಿಸಿ” ಎಂದು ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾಳೆ. ಅಲ್ಲದೆ, ತಾನು ಕೇವಲ ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದು ಕುಟುಂಬದ ನಿರೀಕ್ಷೆಗಳನ್ನು ತಲುಪಲು ವಿಫಲಳಾಗಿದ್ದೇನೆಂದೂ, ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ ಎಂದೂ ಸ್ಪಷ್ಟಪಡಿಸಿದ್ದಾಳೆ.
ಅಂಕಿತಾಗೆ ನೀಟ್ ಮರುಪರೀಕ್ಷೆಯಲ್ಲಿ 166 ಅಂಕಗಳು ಬಂದಿದ್ದವು. ಆದರೆ ಸಾಮಾನ್ಯ ವರ್ಗದ ಕಟ್ಆಫ್ ಅಂಕಗಳು 177 ಇದ್ದ ಕಾರಣ, ಕೇವಲ 11 ಅಂಕಗಳ ಅಂತರದಿಂದ ಆಕೆಗೆ ವೈದ್ಯಕೀಯ ಸೀಟು ಕೈತಪ್ಪಿತ್ತು. ಅಂಕಗಳ ಅಂತರದಿಂದಾಗಿ ಕನಸು ನುಚ್ಚುನೂರಾಗಿ ಹೋದ ನೋವನ್ನು ಸಹಿಸಲಾರದೆ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ.
ಈ ಪ್ರಕರಣ ಸಂಬಂಧ ಕರ್ಣತ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಯುವತಿಯ ದುರ್ಮರಣಕ್ಕೆ ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ತೀವ್ರ ಸಂತಾಪ ಸೂಚಿಸಿದ್ದು, “ಪರೀಕ್ಷೆಗಳಲ್ಲಿ ಎದುರಾಗುವ ಸೋಲು-ಗೆಲುವುಗಳಿಗೆ ವಿದ್ಯಾರ್ಥಿಗಳು ಧೃತಿಗೆಡಬಾರದು. ಯಾವುದೇ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳದೆ, ಕುಟುಂಬದವರ ಕಷ್ಟವನ್ನು ನೆನೆದು ಧೈರ್ಯದಿಂದ ಬದುಕನ್ನು ಎದುರಿಸಬೇಕು” ಎಂದು ಯುವ ಜನತೆಗೆ ಮನವಿ ಮಾಡಿದ್ದಾರೆ.
Police Suspended ವಿದ್ಯಾರ್ಥಿಗಳ ಮೇಲೆ AK-47 ನಿಂದ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಅಮಾನತು