newsics.com | ನ್ಯೂಸಿಕ್ಸ್
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಾಲ್ಕು ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು ವಿಫಲವಾದ ಆರೋಪಕ್ಕೆ ಸಂಬಂಧಿಸಿದಂತೆ, ಖಾಸಗಿ ಆಯುರ್ವೇದ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಯ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಾನವೀಯತೆ ಇಲ್ಲದ ವರ್ತನೆಗೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರಧನ ನೀಡುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಮಾರ್ಚ್ನಲ್ಲಿ ನಡೆದ ಈ ಪ್ರಕರಣದ ತನಿಖೆ ಹಾಗೂ ವೈದ್ಯಕೀಯ ಸೇವೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ವೈದ್ಯರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ನಿಮ್ಮ ಕರ್ತವ್ಯ ನಿಭಾಯಿಸದಿದ್ದರೆ ನಿಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ಬರೆಯುವ ಯಾವುದೇ ಹಕ್ಕಿಲ್ಲ. ನಿಮ್ಮಲ್ಲಿ ಮಾನವೀಯತೆ ಇದ್ದಿದ್ದರೆ, ನಿಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದಿದ್ದರೂ ಮಗುವನ್ನು ಬೇರೆ ಆಸ್ಪತ್ರೆಗೆ ನೀವು ಸ್ವತಃ ಕರೆದೊಯ್ಯಬೇಕಿತ್ತು. ಬಡವರಾಗಿದ್ದ ಕಾರಣ ನಿರ್ಲಕ್ಷ್ಯ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ಆಯುರ್ವೇದ ವೈದ್ಯರು ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡದೇ ಇದ್ದದ್ದನ್ನೂ ನ್ಯಾಯಾಲಯ ಗಂಭೀರವಾಗಿ ಖಂಡಿಸಿತು. ನಾಲ್ಕು ವರ್ಷದ ಮಗು ನಿಮ್ಮ ಮುಂದೆ ತರಲಾಯಿತು. ಆದರೂ ನೀವು ಯಾವುದೇ ಚಿಕಿತ್ಸೆ ನೀಡಲಿಲ್ಲ. ನಿಮ್ಮಲ್ಲಿ ಕನಿಷ್ಠ ಸಹಾನುಭೂತಿ ಇದ್ದಿದ್ದರೆ, ಮಗುವನ್ನು ನೀವೇ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು ಎಂದು ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಾಲಕಿಯನ್ನು ಕರೆದೊಯ್ಯಲಾಗಿದ್ದ ಖಾಸಗಿ ಆಸ್ಪತ್ರೆಯ ವರ್ತನೆಯನ್ನೂ ಸುಪ್ರೀಂ ಕೋರ್ಟ್ “ಅತ್ಯಂತ ಕ್ರೂರ” ಎಂದು ಹೇಳಿತು.
“ನಾವು ದಂಡ ವಿಧಿಸಿದರೆ ಅದು ಎಚ್ಚರಿಕೆಯ ಸಂದೇಶವಾಗಲಿದೆ. ಅದಕ್ಕೂ ಮುನ್ನ ಸಂತ್ರಸ್ತೆಯ ಕುಟುಂಬಕ್ಕೆ ಸಮಂಜಸವಾದ ಪರಿಹಾರಧನ ನೀಡುವ ಬಗ್ಗೆ ಯೋಚಿಸಿ. ನಿಮ್ಮ ನಡೆ ಅತ್ಯಂತ ನಿರ್ದಯವಾಗಿತ್ತು ಎಂದು ಆಸ್ಪತ್ರೆಗೆ ನ್ಯಾಯಾಲಯ ಸೂಚಿಸಿತು. ಆಸ್ಪತ್ರೆ ಹಾಗೂ ಸಂಬಂಧಪಟ್ಟವರು ಸ್ವಯಂಪ್ರೇರಿತವಾಗಿ ಪರಿಹಾರ ನೀಡದಿದ್ದರೆ, ನ್ಯಾಯಾಲಯವೇ ವೆಚ್ಚ ಅಥವಾ ದಂಡ ವಿಧಿಸುವುದಾಗಿ ಪೀಠ ಎಚ್ಚರಿಕೆ ನೀಡಿದೆ.
ಈ ಪ್ರಕರಣವು ಮಾರ್ಚ್ 16ರಂದು ಗಾಜಿಯಾಬಾದ್ನಲ್ಲಿ ನಡೆದ ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದೆ. ಆರೋಪದ ಪ್ರಕಾರ, ಪಕ್ಕದ ಮನೆಯ ವ್ಯಕ್ತಿಯೊಬ್ಬ ಚಾಕೊಲೇಟ್ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದಿದ್ದ. ಬಾಲಕಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಬಳಿಕ ಆಕೆಯನ್ನು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದರು.
ಅರ್ಜಿಯಲ್ಲಿ, ಬಾಲಕಿಯನ್ನು ಮೊದಲಿಗೆ ಕರೆದೊಯ್ದ ಎರಡು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದವು ಎಂದು ಆರೋಪಿಸಲಾಗಿದೆ. ನಂತರ ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್, ಖಾಸಗಿ ಆಸ್ಪತ್ರೆಗಳು ಮತ್ತು ಸ್ಥಳೀಯ ಪೊಲೀಸರ ನಡೆ “ಸಂಪೂರ್ಣ ನಿರ್ಲಕ್ಷ್ಯ ಮತ್ತು ಅಮಾನವೀಯ” ಎಂದು ಏಪ್ರಿಲ್ನಲ್ಲಿ ಕಿಡಿಕಾರಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ.
Bantwal Murder Case ಬಂಟ್ವಾಳ ಬಿ.ಸಿ.ರೋಡ್ನಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ: ಚೇತನ್ ಬಂಧನ, ಏಕಮುಖ ಪ್ರೀತಿ ಶಂಕೆ
Gokarna connection bandh ಗುಡ್ಡ ಕುಸಿತ: ಸಂಪರ್ಕ ಕಡಿದುಕೊಂಡ ಗೋಕರ್ಣ
Teacher’s torcher ಹಣ ಪತ್ತೆಗಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ! ಪೋಷಕರ ಆಕ್ರೋಶ
Server down ನಾಡಕಚೇರಿ ವೆಬ್ಸೈಟ್ ಸರ್ವರ್ ಡೌನ್: ಜಾತಿ, ಆದಾಯ ಪತ್ರ ಸಿಗದೆ ಜನರ ಪರದಾಟ