newsics.com| ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯ ನಾಡಕಚೇರಿ ವೆಬ್ಸೈಟ್ನಲ್ಲಿ ಕಳೆದ ಮೂರು ವಾರಗಳಿಂದ ಭಾರಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಉದ್ಯೋಗಾಕಾಂಕ್ಷಿಗಳು ತಹಸೀಲ್ದಾರ್ ಕಚೇರಿ ಮತ್ತು ಸೈಬರ್ ಸೆಂಟರ್ಗಳಿಗೆ ಅಲೆಯುವಂತಾಗಿದೆ.
ಶಾಲೆಗಳ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ತಾಂತ್ರಿಕ ಅಡಚಣೆ ಎದುರಾಗಿದ್ದು, ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಉದ್ಯೋಗಾಕಾಂಕ್ಷಿಗಳಿಗೆ ಒಳಮೀಸಲಾತಿ ತಲೆನೋವು
ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯವಾಗಿದೆ. ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗಿರುವುದರಿಂದ, ಅದರ ಸೌಲಭ್ಯ ಪಡೆಯಲು ಹೊಸ ಜಾತಿ ಪ್ರಮಾಣಪತ್ರ ಅತ್ಯಗತ್ಯವಾಗಿದೆ.
ಆದರೆ, ಕಳೆದ 20 ದಿನಗಳಿಂದ ಸರ್ವರ್ ಕೈಕೊಟ್ಟಿರುವುದರಿಂದ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಸಾವಿರಾರು ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
ಸ್ಥಗಿತಗೊಂಡ ಪ್ರಮುಖ ಸೇವೆಗಳು
ಕೇವಲ ಜಾತಿ ಮತ್ತು ಆದಾಯ ಪ್ರಮಾಣಪತ್ರ ಮಾತ್ರವಲ್ಲದೆ, ನಾಡಕಚೇರಿಯ ಮೂಲಕ ಪಡೆಯಲಾಗುವ ಪ್ರಮುಖ ಸೇವೆಗಳಾದ ಉತ್ತರ ಜೀವಿತ ಪ್ರಮಾಣಪತ್ರ, ರಹವಾಸಿ ಹಾಗೂ ನಿವಾಸಿ ದೃಢೀಕರಣ ಪತ್ರ ಸೇರಿದಂತೆ ಇತರೆ ಯಾವುದೇ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್ ದೋಷದಿಂದಾಗಿ ಇವೆಲ್ಲವೂ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪ್ರತಿದಿನ ಇಂಟರ್ನೆಟ್ ಸೆಂಟರ್ ಹಾಗೂ ಕಂದಾಯ ಕಚೇರಿಗಳಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ.
ಶೀಘ್ರದಲ್ಲೇ ಸಮಸ್ಯೆ ಪರಿಹಾರ
ಸರ್ವರ್ ಅಪ್ಡೇಟ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಆಗಾಗ ಸರ್ವರ್ ಬರುತ್ತಿದೆಯಾದರೂ, ನಿರಂತರವಾಗಿ ಕೆಲಸ ಮಾಡುತ್ತಿಲ್ಲ. ಈ ತಾಂತ್ರಿಕ ದೋಷ ಇಡೀ ರಾಜ್ಯಾದ್ಯಂತ ಇದ್ದು, ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುವ ನಿರೀಕ್ಷೆಯಿದೆ. ಸರ್ವರ್ ಸರಿಯಾದ ತಕ್ಷಣ ಬಾಕಿ ಇರುವ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ
ವೆಬ್ಸೈಟ್ ಸಮಸ್ಯೆ ಶೀಘ್ರದಲ್ಲೇ ಸರಿಹೋಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಲೇ ದಿನಗಳನ್ನು ತಳ್ಳುತ್ತಿದ್ದಾರೆಯೇ ವಿನಃ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Teacher’s torcher ಹಣ ಪತ್ತೆಗಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ! ಪೋಷಕರ ಆಕ್ರೋಶ