newsics.com| ನ್ಯೂಸಿಕ್ಸ್
ಅಯೋಧ್ಯೆ ರಾಮಮಂದಿರದ ಹುಂಡಿ ಹಣ ದುರುಪಯೋಗ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಹೊಸ ಸಂಗತಿ ಬೆಳಕಿಗೆ ಬರುತ್ತಿದೆ. ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯಲ್ಲಿ, ಆರೋಪಿ ಅವಿನಾಶ್ ಶುಕ್ಲಾ ಭಕ್ತರು ನೀಡಿದ ದೇಣಿಗೆಯ ಹಣವನ್ನು ದುರುಪಯೋಗಪಡಿಸಿಕೊಂಡು ಐಷಾರಾಮಿ ಜೀವನ ನಡೆಸಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮೂಲಗಳ ಪ್ರಕಾರ, ತಿಂಗಳಿಗೆ ಕೇವಲ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ, ರಾಮಮಂದಿರದ ಹುಂಡಿಯಿಂದ ಹಣ ಕಳವು ಮಾಡಿ ವೈಯಕ್ತಿಕ ಸುಖವಿಲಾಸಕ್ಕೆ ಬಳಸಿದ್ದಾನೆ. ತನ್ನ ಗರ್ಲ್ಫ್ರೆಂಡ್ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿರುವುದಲ್ಲದೆ, ದುಬಾರಿ ಬೆಲೆಯ ಐಫೋನ್ನ್ನು ಉಡುಗೊರೆಯಾಗಿ ನೀಡಿದ್ದಾನೆ ಎನ್ನಲಾಗಿದೆ.
ಇದರ ಜೊತೆಗೆ ಕದ್ದ ಹಣದಿಂದ ಹೊಸ ಮನೆ ನಿರ್ಮಿಸಿ, ಕಾರು ಖರೀದಿಸಿದ್ದಾನೆ. ಅನುಮಾನ ಬಾರದಂತೆ ಕಾರನ್ನು ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ನೋಂದಾಯಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಎಸ್ಐಟಿ ಅಧಿಕಾರಿಗಳು ಆರೋಪಿ ಬ್ಯಾಂಕ್ ಖಾತೆಯ ವಹಿವಾಟು ಪರಿಶೀಲಿಸಿದ ವೇಳೆ ಆತನ ಆದಾಯಕ್ಕೆ ಮೀರಿ ಅಪಾರ ಪ್ರಮಾಣದ ಹಣದ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದಾಗ ದೇಣಿಗೆ ಹಣದ ದುರುಪಯೋಗದ ಜಾಲ ಬೆಳಕಿಗೆ ಬಂದಿದೆ.
ಆರೋಪಿ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಮೇಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಒಟ್ಟು ಸುಮಾರು 19 ಲಕ್ಷ ರೂ. ಹಣವನ್ನು ಐಷಾರಾಮಿ ಜೀವನ ಹಾಗೂ ಕುಟುಂಬದ ಅಗತ್ಯಗಳಿಗೆ ಬಳಸಿರುವುದಾಗಿ ಹೇಳಲಾಗಿದೆ.
ತನ್ನೊಬ್ಬ ಸಹೋದರನ ಮದುವೆಗಾಗಿ ಸುಮಾರು 6 ಲಕ್ಷ ರೂ. ಖರ್ಚು ಮಾಡಿದ್ದಲ್ಲದೆ, ಮತ್ತೊಬ್ಬ ಸಹೋದರನಿಗೆ 5ರಿಂದ 6 ಲಕ್ಷ ರೂ. ನಗದು ಉಡುಗೊರೆಯಾಗಿ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಪರಿಚಯಸ್ಥರಿಗೂ ವಿವಿಧ ಮೊತ್ತದ ಹಣವನ್ನು ಹಂಚಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರೋಪಿ ಬಳಿ ಇದ್ದ 20.39 ಲಕ್ಷ ರೂ. ನಗದು, 1,121 ಅಮೆರಿಕನ್ ಡಾಲರ್, ಚಿನ್ನ-ಬೆಳ್ಳಿಯ ಆಭರಣಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಕಳುವಾದ ಹಣವನ್ನು ಎಲ್ಲಿ, ಎಷ್ಟು ಪ್ರಮಾಣದಲ್ಲಿ ಖರ್ಚು ಮಾಡಲಾಗಿದೆ ಹಾಗೂ ಯಾರ್ಯಾರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಕುರಿತು ಎಸ್ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಹಣ ಸ್ವೀಕರಿಸಿರುವ ಶಂಕಿತ ವ್ಯಕ್ತಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
Ayodhye ರಾಮ ಮಂದಿರದಲ್ಲಿ ಈವರೆಗೆ ಸುಮಾರು 2 ರಿಂದ 3 ಕೋಟಿ ರೂ. ಕಳ್ಳತನ : ಕೊನೆಗೂ ಸತ್ಯ ಬಾಯಿಬಿಟ್ಟ ಕಳ್ಳರು