newsics.com | ನ್ಯೂಸಿಕ್ಸ್
ಚಿಕ್ಕಮಗಳೂರು: ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಮಾಲೀಕರಿಲ್ಲದ ಬೀಡಾಡಿ ದನಗಳ ದೇಹದ ವಿವಿಧ ಭಾಗಗಳಲ್ಲಿ ಆಳವಾದ ಗಾಯಗಳಾಗಿ ಭೀಕರ ರಕ್ತಸ್ರಾವವಾಗುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ತಂಡವೊಂದು ಕತ್ತಿಯಿಂದ ಹಸುಗಳ ಮೇಲೆ ದೌರ್ಜನ್ಯ ಎಸಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಚಂದುವಳ್ಳಿಯ ಪರಿಸರದಲ್ಲಿ ನೂರಕ್ಕೂ ಹೆಚ್ಚು ಅನಾಥ ಹಸುಗಳು ಅಲೆಯುತ್ತಿದ್ದು, ಅವುಗಳಲ್ಲಿ ಮೂರು ಹಸುಗಳ ಕಾಲು ಹಾಗೂ ತೊಡೆಯ ಭಾಗಗಳು ಸೀಳಿದಂತೆ ಗಾಯಗೊಂಡಿವೆ.
ಇವು ಮಾಲೀಕರಿಲ್ಲದ ದನಗಳಾಗಿರುವುದರಿಂದ, ಕಳ್ಳತನ ಮಾಡಲು ಸುಲಭವಾಗಲಿ ಎಂಬ ಕಾರಣಕ್ಕೆ ದನಗಳ್ಳರೇ ಹಸುಗಳ ಹಿಂಗಾಲು ಹಾಗೂ ಬಾಲವನ್ನು ಕತ್ತರಿಸಿ ಅಂಗವಿಕಲಗೊಳಿಸಲು ಯತ್ನಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘೋರ ಕೃತ್ಯ ಎಸಗಿದವರನ್ನು ಕೂಡಲೇ ಜೈಲಿಗಟ್ಟಬೇಕೆಂದು ಮೂಡಿಗೆರೆ ವೃತ್ತ ನಿರೀಕ್ಷಕರಿಗೆ (ಸಿಐ) ದೂರು ನೀಡಿದ್ದಾರೆ.
ಸ್ಥಳಕ್ಕೆ ಪಶುವೈದ್ಯಕೀಯ ಆ್ಯಂಬುಲೆನ್ಸ್ನೊಂದಿಗೆ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರಾದರೂ, ಗಾಯಾಳು ಹಸುಗಳು ಭಯದಿಂದ ಕಾಫಿ ತೋಟಗಳತ್ತ ಓಡುತ್ತಿರುವುದರಿಂದ ಅವುಗಳನ್ನು ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡುವುದು ಪಶುಪಾಲನಾ ಇಲಾಖೆಗೆ ಕಷ್ಟಸಾಧ್ಯವಾಗಿದೆ.
ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯಾಮ ಅವರು ಘಟನೆಯ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. “ವರದಿಗಳ ಪ್ರಕಾರ ಈ ಘಟನೆ ನಡೆದು ವಾರ ಕಳೆದಿದೆ. ಕಾಫಿ ತೋಟಗಳ ಮಧ್ಯೆ ತಿರುಗಾಡುವ ಈ ಹಸುಗಳು, ಮಳೆಯಿಂದ ಬಚಾವಾಗಲು ಒಣ ಜಾಗದ ಕಡೆಗೆ ಧಾವಿಸಿವೆ” ಎಂದು ತಿಳಿಸಿದ್ದಾರೆ.
ಈ ವೇಳೆ ತೋಟಗಳ ರಕ್ಷಣೆಗಾಗಿ ಹಾಕಲಾಗಿರುವ ಚೂಪಾದ ತಂತಿ ಬೇಲಿಗಳನ್ನು ದಾಟುವಾಗ ಅಥವಾ ದನಗಳು ಪರಸ್ಪರ ಜಗಳ ಆಡುವಾಗ ಈ ತರಹದ ಗಾಯಗಳಾಗಿವೆ. ಸ್ಥಳ ಪರಿಶೀಲನೆ ನಡೆಸಿದಾಗ ಮನುಷ್ಯರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಯಾವುದೇ ಕುರುಹುಗಳು ಲಭ್ಯವಾಗಿಲ್ಲ ಎಂದು ಹೇಳುವ ಮೂಲಕ ಎಸ್ಪಿ ಅವರು ಸಾರ್ವಜನಿಕರ ಹಲ್ಲೆಯ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Road Mishap ಸಚಿವ ಯು.ಟಿ ಖಾದರ್ ಎಸ್ಕಾರ್ಟ್ ವಾಹನಕ್ಕೆ ಸ್ಕೂಟರ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ