newsics.com | ನ್ಯೂಸಿಕ್ಸ್
ತೆಲಂಗಾಣ: ಆನ್ಲೈನ್ ಜೂಜಿನ ವ್ಯಸನಕ್ಕೆ ಬಲಿಯಾಗಿ, ಮಾಡಿಕೊಂಡಿದ್ದ ಲಕ್ಷಾಂತರ ರೂಪಾಯಿ ಸಾಲ ತೀರಿಸಲು 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ 55 ವರ್ಷದ ಮಹಿಳೆಯನ್ನು ಅಪಹರಿಸಿ, ಚಿನ್ನಾಭರಣ ದೋಚಿ, ಕೊಲೆ ಮಾಡುವ ಉದ್ದೇಶದಿಂದ ಕೃಷಿ ಬಾವಿಗೆ ತಳ್ಳಿರುವ ಘಟನೆ ತೆಲಂಗಾಣದ ಕರೀಮನಗರ ಜಿಲ್ಲೆಯಲ್ಲಿ ನಡೆದಿದೆ.
ಆದರೆ, ಮಹಿಳೆಯ ಅದ್ಭುತ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಬರೋಬ್ಬರಿ 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಹಿನ್ನೆಲೆ:
ಸಂತ್ರಸ್ತರನ್ನು ದಿನಗೂಲಿ ಕಾರ್ಮಿಕರಾದ ತಂಗರಾಳ ಲಕ್ಷ್ಮಿ (55) ಎಂದು ಗುರುತಿಸಲಾಗಿದೆ. ಕರೀಮನಗರದ ಲೇಬರ್ ಅಡ್ಡಾದಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದ ಲಕ್ಷ್ಮಿ ಅವರನ್ನು ಆರೋಪಿ (21 ವರ್ಷದ ವಿದ್ಯಾರ್ಥಿ) ತೋಟದ ಕೆಲಸ ಕೊಡುವುದಾಗಿ ನಂಬಿಸಿ, ಬೈಕ್ನಲ್ಲಿ ಸುಮಾರು 15 ಕಿಲೋಮೀಟರ್ ದೂರದ ನುಸ್ತುಲಾಪುರದ ನಿರ್ಜನ ಕೃಷಿ ಭೂಮಿಗೆ ಕರೆದೊಯ್ದಿದ್ದಾನೆ.
ಸ್ಥಳಕ್ಕೆ ತಲುಪಿದ ತಕ್ಷಣ ಆರೋಪಿಯು ಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾನೆ. ತಾನು ಸಿಕ್ಕಿಬೀಳಬಹುದು ಎಂಬ ಭಯದಿಂದ, ಸಾಕ್ಷ್ಯವನ್ನು ನಾಶಪಡಿಸಲು ಲಕ್ಷ್ಮಿ ಅವರನ್ನು ಅಲ್ಲಿಯೇ ಇದ್ದ ಆಳವಾದ ಕೃಷಿ ಬಾವಿಗೆ ತಳ್ಳಿದ್ದಾನೆ.
21 ಗಂಟೆಗಳ ಕಾಲ ಸಾವಿನ ದಂಡೆಯ ಮೇಲೆ…
ಬಾವಿಗೆ ಬಿದ್ದ ತಕ್ಷಣ ಧೃತಿಗೆಡದ ಲಕ್ಷ್ಮಿ ಅವರಿಗೆ ಈಜಲು ಬರುತ್ತಿದ್ದರಿಂದ ತಕ್ಷಣವೇ ನೀರಿನ ಮೇಲೆ ತೇಲಿದ್ದಾರೆ. ಮೊದಲು ಬಾವಿಯಲ್ಲಿದ್ದ ಹಗ್ಗವನ್ನು ಹಿಡಿದು ಮೇಲಕ್ಕೆ ಬರಲು ಯತ್ನಿಸಿದರು. ಇದನ್ನು ಗಮನಿಸಿದ ಕ್ರೂರಿ ಆರೋಪಿ, ಆಕೆ ಹೇಗಿದ್ದರೂ ಸಾಯಲಿ ಎಂದು ಹಗ್ಗವನ್ನೇ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದನು.
ಆದರೂ ಧೈರ್ಯ ಕಳೆದುಕೊಳ್ಳದ ಲಕ್ಷ್ಮಿ, ಬಾವಿಯ ಮೋಟಾರ್ ಪೈಪ್ಲೈನ್ಗೆ ಅಳವಡಿಸಲಾಗಿದ್ದ ದಪ್ಪನೆಯ ವಿದ್ಯುತ್ ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇಡೀ ರಾತ್ರಿ ಘೋರ ಕತ್ತಲಿನಲ್ಲಿ, ತೀವ್ರ ಚಳಿಯ ನಡುವೆಯೂ ಆ ವೈರ್ ಅನ್ನೇ ಹಿಡಿದು ನಿಂತಿದ್ದರು. ಬಾವಿಯು ನಿರ್ಜನ ಪ್ರದೇಶದಲ್ಲಿದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಮಾರನೇ ದಿನ ಬೆಳಿಗ್ಗೆ ರೈತರು ಜಮೀನಿಗೆ ಬಂದಾಗ ಬಾವಿಯಲ್ಲಿ ಮಹಿಳೆ ಇರುವುದನ್ನು ಕಂಡು, ಮಂಚ ಮತ್ತು ಹಗ್ಗಗಳ ಸಹಾಯದಿಂದ ಆಕೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಆರೋಪಿಯ ಬಂಧನ:
ಪೊಲೀಸ್ ತನಿಖೆಯ ಪ್ರಕಾರ, ಆರೋಪಿಯು ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಆ್ಯಪ್ಗಳಿಂದಾಗಿ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನು. ಅದನ್ನು ತೀರಿಸಲು ಈ ದರೋಡೆ ಮತ್ತು ಕೊಲೆಗೆ ಸಂಚು ರೂಪಿಸಿದ್ದನು.
ರಕ್ಷಿಸಲ್ಪಟ್ಟ ಲಕ್ಷ್ಮಿ ನೀಡಿದ ನಿಖರವಾದ ಮಾಹಿತಿ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆರೋಪಿ ಬಳಸಿದ್ದ ರಾಪಿಡೋ (Rapido) ಬೈಕ್ ಬುಕಿಂಗ್ ವಿವರಗಳನ್ನು ಆಧರಿಸಿ ಕರೀಮನಗರ ಪೊಲೀಸರು ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಕದ್ದ ಚಿನ್ನವನ್ನು ಖರೀದಿಸಿದ ಸ್ಥಳೀಯ ಜ್ಯುವೆಲ್ಲರಿ ಮಾಲೀಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಲಕ್ಷ್ಮಿ ಅವರ ಸಾಹಸ ಮತ್ತು ಬದುಕಬೇಕೆಂಬ ಅದಮ್ಯ ಚೇತನಕ್ಕೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?