newsics.com | ನ್ಯೂಸಿಕ್ಸ್
ಡೆಹ್ರಾಡೂನ್: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ದೇಣಿಗೆ ವಿವಾದದ ಬೆನ್ನಲ್ಲೇ, ಇದೀಗ ಉತ್ತರ ಭಾರತದ ಬದರಿನಾಥ ಧಾಮದಲ್ಲೂ ಕಾಣಿಕೆ ಹಗರಣದ ಕರಿನೆರಳು ಬಿದ್ದಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರು ಸಮರ್ಪಿಸಿದ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಈ ಕುರಿತು ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಮುಖ್ಯಸ್ಥರಾದ ಹೇಮಂತ್ ದ್ವಿವೇದಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕರ ಆಕ್ರೋಶ ಮತ್ತು ಭ್ರಷ್ಟಾಚಾರದ ದೂರುಗಳನ್ನು ಮಂಡಳಿ ಹಗುರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.
ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್; ಉದ್ಯೋಗಿಗೆ ನೋಟಿಸ್ ಜಾರಿ
ಕಾಣಿಕೆ ಹಣದ ಕೈಚಳಕದಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿ ದೇವಸ್ಥಾನ ಸಮಿತಿಯ ಅಧ್ಯಕ್ಷರ ವೈಯಕ್ತಿಕ ಕಾರ್ಯದರ್ಶಿ (ಪಿಎ) ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದನ್ನು ಬಲವಾಗಿ ನಿರಾಕರಿಸಿರುವ ಹೇಮಂತ್ ದ್ವಿವೇದಿ, “ಆರೋಪ ಎದುರಿಸುತ್ತಿರುವ ನೌಕರ ನನ್ನ ವೈಯಕ್ತಿಕ ಸಹಾಯಕನಲ್ಲ, ಆತ ದೇವಸ್ಥಾನದ ಆಡಳಿತ ವಿಭಾಗದ ಸಾಮಾನ್ಯ ನೌಕರ,” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸದರಿ ನೌಕರನಿಗೆ ಇಲಾಖಾ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಲಿಖಿತ ವಿವರಣೆ ನೀಡಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.
ತಪ್ಪು ಸಾಬೀತಾದರೆ ಜೈಲು ಫಿಕ್ಸ್
ಇಡೀ ಹಗರಣದ ಕುರಿತು ತನಿಖೆಯ ಮುಂದಾಳತ್ವ ವಹಿಸಿರುವ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಮಾತನಾಡಿ, “ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಗರ್ಭಗುಡಿ ಹಾಗೂ ಕೌಂಟರ್ಗಳ ಸುತ್ತಮುತ್ತಲಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ಇಂಚಿಂಚು ದೃಶ್ಯಾವಳಿಗಳನ್ನು ತಾಂತ್ರಿಕ ತಂಡದ ನೆರವಿನಿಂದ ಪರಿಶೀಲಿಸಲಾಗುತ್ತಿದೆ,” ಎಂದಿದ್ದಾರೆ. ಸಾಕ್ಷ್ಯಗಳು ಲಭ್ಯವಾದ ತಕ್ಷಣವೇ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.
ದೇವಸ್ಥಾನದ ಆಂತರಿಕ ನಿಯಮಾವಳಿಗಳ ಪ್ರಕಾರ, ಆರ್ಥಿಕ ವಂಚನೆ ಎಸಗಿರುವ ಸಿಬ್ಬಂದಿಯ ವಿರುದ್ಧ ಇಲಾಖಾ ತನಿಖೆಯ ಜೊತೆಗೆ ‘ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939ರ ಅಡಿಯಲ್ಲಿ ಕಠಿಣ ಸೆಕ್ಷನ್ಗಳನ್ನು ಜಡಿಯಲು ತೀರ್ಮಾನಿಸಲಾಗಿದೆ. ಪ್ರಕರಣದ ಅಂತಿಮ ವರದಿ ಹೊರಬೀಳುವವರೆಗೂ ಭಕ್ತಾದಿಗಳು ಯಾವುದೇ ರೀತಿಯ ಆಧಾರರಹಿತ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ.
Rain Alert: ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಅಬ್ಬರ; ಮೂರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ!