newsics.com | ನ್ಯೂಸಿಕ್ಸ್
ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ ದರೋಡೆ ನಡೆಸಲು ಹೊಂಚು ಹಾಕಿದ ಆರೋಪಿಗಳ ತಂಡ, ಗುರುವಾರ ನಸುಕಿನ ವೇಳೆ ಗುಂಡಿನ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಮೈಸೂರಿನ ಗೋಕುಲಂ ನಿವಾಸಿ ಚಾಲಕ ಶಂಕರ್ ಕೂದಲೆಳೆ ಅಂತರದಲ್ಲಿ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಮೈಸೂರು ಕಡೆ ಔಷಧಗಳನ್ನು ತುಂಬಿಕೊಂಡು ಕೊರಿಯರ್ ಟ್ರಕ್ ಬರುತ್ತಿತ್ತು. ಮಂಡ್ಯ ಶಾಖೆಗೆ ಔಷಧಗಳನ್ನು ಕೊಡುವ ಉದ್ದೇಶದಿಂದ ಸರ್ವಿಸ್ ರಸ್ತೆಗೆ ಟ್ರಕ್ ಬಂದಿದೆ. ನಗರದ ಹೊರವಲಯದ ಅಮರಾವತಿ ಹೋಟೆಲ್ ಸಮೀಪ ಅಂಡರ್ಪಾಸ್ ಬಳಿ ಟ್ರಕ್ ಅನ್ನು ಅಡ್ಡಗಟ್ಟಲು ಮುಸುಕುಧಾರಿ ಐವರ ತಂಡ ಯತ್ನಿಸಿದೆ.
ರಸ್ತೆಬದಿ ಕಪ್ಪು ಬಣ್ಣದ ಕಾರು (ಎಸ್ಯುವಿ) ನಿಂತಿರುವುದನ್ನು ಗಮನಿಸಿದ ಚಾಲಕ ಶಂಕರ್ ವಾಹನವನ್ನು ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿದ್ದಾರೆ. ಆರೋಪಿಗಳು ಕಾರಿನಲ್ಲಿ ಟ್ರಕ್ ಅನ್ನು ಅರ್ಧ ಕಿ.ಮೀ. ಹಿಂಬಾಲಿಸಿ, ಟ್ರಕ್ ಅನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಇದೇ ವೇಳೆ ಆರೋಪಿಯೊಬ್ಬ ಗನ್ನಿಂದ ಚಾಲಕನತ್ತ ಗುಂಡು ಹಾರಿಸಿದ್ದಾನೆ. ಗುಂಡು ಟ್ರಕ್ನ ಸೈಡ್ ವಿಂಡೊಗೆ ತಗುಲಿದೆ. ಸ್ವಲ್ಪದರಲ್ಲೇ ಚಾಲಕ ಪಾರಾಗಿದ್ದಾರೆ.
ಅದೇ ಸಮಯದಲ್ಲಿ ಎರಡು ವಾಹನಗಳು ಬಂದಿದ್ದನ್ನು ಗಮನಿಸಿದ ಆರೋಪಿಗಳ ತಂಡ ಕೂಡಲೇ ಕಾರು ಹತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಚಾಲಕ ವಾಹನವನ್ನು ಮಂಡ್ಯ ಶಾಖೆಗೆ ತಂದು ಔಷಧಗಳನ್ನು ಅನ್ಲೋಡ್ ಮಾಡಿ, ಗಾಬರಿಯಲ್ಲೇ ಮೈಸೂರಿಗೆ ಟ್ರಕ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ.
ಚಾಲಕ ಶಂಕರ್ ಘಟನೆಯ ಬಗ್ಗೆ ಮೇಲ್ವಿಚಾರಕನಿಗೆ ಮಾಹಿತಿ ನೀಡಿದ್ದಾರೆ.
ಅವರು ಪೊಲೀಸರಿಗೆ ದೂರು ನೀಡಲು ಸೂಚಿಸಿದ ಮೇರೆಗೆ ಮಂಡ್ಯ ಪೊಲೀಸರಿಗೆ ಶಂಕರ್ ದೂರು ನೀಡಲು ಬಂದಿದ್ದಾರೆ. ಆದರೆ, ರಾತ್ರಿ 11ರವರೆಗೂ ಈ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
High court styas 52 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!