newsics.com | ನ್ಯೂಸಿಕ್ಸ್
ಬೆಂಗಳೂರು: ಗೃಹಜ್ಯೋತಿ ಯೋಜನೆಯ ದುರ್ಬಳಕೆಗೆ ಸಂಪೂರ್ಣ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ಮುಂದೆ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಹೊಸದಾಗಿ ಅರ್ಜಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್ಗಳ ಒಕ್ಕೂಟದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಈ ಮಹತ್ತರ ಘೋಷಣೆ ಮಾಡಿದರು.
ಹೊರರಾಜ್ಯದವರಿಗೆ ಇಲ್ಲ ‘ಗೃಹಜ್ಯೋತಿ’: ಡಬಲ್ ಸಂಪರ್ಕಗಳಿಗೆ ಕತ್ತರಿ!
ಸದ್ಯ ರಾಜ್ಯದಲ್ಲಿ ಸುಮಾರು 1.64 ಕೋಟಿ ಗ್ರಾಹಕರು ಗೃಹಜ್ಯೋತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ವ್ಯಾಪಕವಾಗಿ ದುರ್ಬಳಕೆಯಾಗುತ್ತಿರುವ ಬಗ್ಗೆ ಇಂಧನ ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಿಎಂ, “ನಮ್ಮ ರಾಜ್ಯದ ಮೂಲ ಜನರಿಗೆ ಮಾತ್ರ ಈ ಉಚಿತ ಸೌಲಭ್ಯ ಸಿಗಬೇಕು. ಇಲ್ಲಿ ಕೇವಲ ಬದುಕಲು ಬಂದಿರುವ ಹೊರರಾಜ್ಯದವರಿಗೆ ಅಥವಾ ಕರ್ನಾಟಕದ ಮತದಾರರಲ್ಲದವರಿಗೆ ಇನ್ನು ಮುಂದೆ ಗೃಹಜ್ಯೋತಿ ಉಚಿತ ವಿದ್ಯುತ್ ಸಿಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಡಬಲ್ ಗೃಹಜ್ಯೋತಿ ಸಂಪರ್ಕ ಹೊಂದಿದ್ದರೆ ಅದನ್ನು ತಕ್ಷಣವೇ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು!
ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಹೊಸ ಅರ್ಜಿಗಳನ್ನು ಇಲಾಖೆಯ ವತಿಯಿಂದಲೇ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಅರ್ಜಿಯಲ್ಲಿ ಸಾರ್ವಜನಿಕರ ಫೋಟೋ ಹಾಗೂ ಇತರೆ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಇಂಧನ ಇಲಾಖೆಯ ಸಿಬ್ಬಂದಿ ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ.
ಗ್ರಾಮ ಮಟ್ಟದಲ್ಲಿ ವಿಶೇಷ ಸಮಿತಿ ರಚನೆ:
ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪರಿಶೀಲನೆಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ, ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಅರ್ಹತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರತ್ಯೇಕ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
ಕರೆಂಟ್ ಹೋದ್ರೆ ನನ್ನನ್ನೇ ಬೈಯುತ್ತಾರೆ: ಸಿಎಂ ಮಾರ್ಮಿಕ ನುಡಿ
ಇದೇ ವೇಳೆ ಇಲಾಖೆಯ ನೌಕರರ ಕೆಲಸವನ್ನು ಶ್ಲಾಘಿಸುವಾಗ ಸಿಎಂ ಡಿಕೆಶಿ ತಮ್ಮದೇ ಶೈಲಿಯಲ್ಲಿ ಮಾರ್ಮಿಕವಾಗಿ ನುಡಿದರು. “ರಾಜ್ಯದಲ್ಲಿ ಕರೆಂಟ್ ಒಂದು ನಿಮಿಷ ಹೋದರೂ ಸಾರ್ವಜನಿಕರು ಆ ಡಿಕೆ ನನ್ಮಗ ಬಂದ, ಕರೆಂಟ್ ತೆಗೆದ ಎಂದು ನನ್ನನ್ನೇ ನೇರವಾಗಿ ಬೈಯುತ್ತಾರೆ. ಆದರೆ ಇಷ್ಟೆಲ್ಲಾ ಸವಾಲುಗಳ ಮಧ್ಯೆಯೂ ಇಲಾಖೆಯ ಸಿಬ್ಬಂದಿಯಾಗಿ ನೀವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದೀರಿ,” ಎಂದು ನಗುತ್ತಲೇ ನೌಕರರ ಬೆನ್ನು ತಟ್ಟಿದರು.
ರಾಜಕೀಯ ಟೀಕೆಗಳಿಗೆ ಜಾರ್ಜ್ ತಿರುಗೇಟು
ಇದೇ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯಮಂತ್ರಿಗಳ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಗೃಹಜ್ಯೋತಿ ಯೋಜನೆಯಲ್ಲಿ ಆಗುತ್ತಿರುವ ತಾಂತ್ರಿಕ ತಪ್ಪುಗಳು ಹಾಗೂ ದುರ್ಬಳಕೆಯನ್ನು ಸರಿಪಡಿಸುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ವ್ಯವಸ್ಥೆಯನ್ನು ಸರಿಹಾದಿಗೆ ತರುತ್ತಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ಅವರು ತಿರುಗೇಟು ನೀಡಿದರು.