ತೆಲಂಗಾಣದ ಜಗಿತಿಯಾಲ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕೇವಲ 3 ನಿಮಿಷ ತಡವಾಗಿ ಬಂದ ಕಾರಣ ವಿದ್ಯಾರ್ಥಿನಿಯೊಬ್ಬಳಿಗೆ NEET ಮರುಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಪರೀಕ್ಷಾ ಕೇಂದ್ರದ ಗೇಟ್ ಮುಂದೆ ತಾಯಿ ಭದ್ರತಾ ಸಿಬ್ಬಂದಿಯ ಕಾಲಿಗೆ ಬಿದ್ದು, ತನ್ನ ಮಗಳಿಗೆ ಒಂದು ಅವಕಾಶ ನೀಡುವಂತೆ ಕಣ್ಣೀರಿಟ್ಟು ಬೇಡಿಕೊಂಡರೂ ನಿಯಮಗಳ ಕಾರಣ ಅಧಿಕಾರಿಗಳು ಪ್ರವೇಶ ನೀಡಲಿಲ್ಲ.
ಕೋಡಿಮ್ಯಾಲ ಮಂಡಲದ ಜೆಎನ್ಟಿಯು ನಾಚುಪಲ್ಲಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ತಲುಪುವಷ್ಟರಲ್ಲಿ ಗೇಟ್ಗಳು ಮುಚ್ಚಲ್ಪಟ್ಟಿದ್ದವು. ಪರಿಣಾಮ, ವೈದ್ಯೆಯಾಗುವ ಕನಸಿನೊಂದಿಗೆ ಒಂದು ವರ್ಷ ಶ್ರಮಿಸಿದ ವಿದ್ಯಾರ್ಥಿನಿ ಪರೀಕ್ಷೆ ಬರೆಯದೇ ಕಣ್ಣೀರಿನಲ್ಲಿ ಮನೆಗೆ ಮರಳಬೇಕಾಯಿತು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರೀಕ್ಷೆಯ ಭದ್ರತೆಗಾಗಿ ಕಟ್ಟುನಿಟ್ಟಿನ ನಿಯಮಗಳು ಅಗತ್ಯವಾದರೂ, ಕೇವಲ 2-3 ನಿಮಿಷಗಳ ವಿಳಂಬಕ್ಕೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದು ಎಷ್ಟು ನ್ಯಾಯ ಎಂಬ ಪ್ರಶ್ನೆ ಮತ್ತೆ ಎದ್ದಿದೆ.