newsics.com/ನ್ಯೂಸಿಕ್ಸ್
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ. ಐದನೇ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದ್ದರಿಂದ, ಈ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿನ ಫಲಿತಾಂಶ ರಾಜ್ಯ ಬಿಜೆಪಿ ನಾಯಕರಿಗೆ ಮತ್ತು ಜೆಡಿಎಸ್ಸಿಗೆ ಪಾಠ ಕಲಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ಶಿಸ್ತಿನ ಗೆರೆಯನ್ನು ದಾಟದ ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಮುಖಭಂಗವನ್ನು ಎದುರಿಸಿದೆ. ದೇಶದೆಲ್ಲಡೆ ಪ್ರಾದೇಶಿಕ ಪಾರ್ಟಿಗಳಲ್ಲಿ ಬಿರುಕು ಮೂಡಲು ಬಿಜೆಪಿಯ ರಾಜಕಾರಣ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿರುವ ಹೊತ್ತಿನಲ್ಲಿ, ತಮ್ಮದೇ ಪಾರ್ಟಿಯಲ್ಲಿ ಕ್ರಾಸ್ ವೋಟಿಂಗ್, ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷದ ನಾಯಕ ಆರ್.ಅಶೋಕ ಅವರ ನಾಯಕತ್ವದ ಬಗ್ಗೆ, ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಎಲ್ಲರಿಗಿಂತ ಜಾಸ್ತಿ ಮತವನ್ನು ಪಡೆದ ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್
ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರೂ ಆಗಿರುವ ವಿನಯ್ ಕಾರ್ತಿಕ್ ಪ್ರಕಾಶ್, ಎಲ್ಲರಿಗಿಂತ ಹೆಚ್ಚು (32) ಮತವನ್ನು ಪಡೆದು, ಚುನಾವಣಾ ರಣಕಣವನ್ನು ಹುಬ್ಬೇರುವಂತೆ ಮಾಡಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದರೂ, ಸ್ವಲ್ಪ ಎಡವಟ್ಟಾಗಿದ್ದರೂ, ಇನ್ನಷ್ಟು ಮುಖಭಂಗವನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತಿತ್ತು.
ಈ ಚುನಾವಣೆಯಲ್ಲಿ, ಯಾರು ಯಾರಿಗೆ ಮತವನ್ನು ಹಾಕಬೇಕು, ಯಾರಿಗೆ ಎಷ್ಟು ಮತವನ್ನು ಹಾಕಬೇಕು ಎನ್ನುವ ವಿಚಾರದಲ್ಲಿ ಬಿಜೆಪಿಯಲ್ಲಿ ಕೊನೇ ಗಳಿಗೆಯವರೆಗೂ ಗೊಂದಲವಿತ್ತು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕೆಲವರು ಒಬ್ಬರಿಗೆ 30 ಮತಗಳು ಎನ್ನುತ್ತಿದ್ದರೆ ಮತ್ತೊಬ್ಬರು 29 ಮತ ಎನ್ನುತ್ತಿದ್ದರು. ರಾಜ್ಯಾಧ್ಯಕ್ಷರ ಬದಲಾವಣೆಯ ಸುದ್ದಿ, ರಾಜ್ಯ ಬಿಜೆಪಿಯಲ್ಲಿ ಬಲವಾಗಿ ಹರಿದಾಡುತ್ತಿರುವ ಈ ಸಮಯದಲ್ಲಿ, ವಿಜಯೇಂದ್ರಗೆ ವೈಯಕ್ತಿಕವಾಗಿ ಆದ ಸೆಟ್’ಬ್ಯಾಕ್ ಇದು ವ್ಯಾಖ್ಯಾನಿಸಲಾಗುತ್ತಿದೆ. ಈ ವಿದ್ಯಮಾನ, ಹೈಕಮಾಂಡ್ ಅಂಗಣದಲ್ಲಿ ಯಾವ ರೀತಿ ತಿರುವನ್ನು ಪಡೆಯುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟು ಅಡ್ಡಮತದಾನವಾಗಿದ್ದು ಎಷ್ಟು – ಬಿಜೆಪಿ ನಾಯಕರಲ್ಲಿ ಗೊಂದಲ
ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರು ಯಾರು ಎನ್ನುವ ಕೆಲವೊಂದು ಹೆಸರುಗಳು ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಆದರೆ, ಇದು ಗೌಪ್ಯ ಮತದಾನದ ಪದ್ದತಿ ಮತ್ತು ಹೆಸರನ್ನು ಬಿಜೆಪಿ ಪ್ರಮುಖರು ಇನ್ನೂ ಬಹಿರಂಗ ಪಡಿಸಲಿಲ್ಲ. ಬಿಜೆಪಿಯ ಮೀರ್ ಸಾದಿಕ್ ಯಾರು ಎನ್ನುವುದನ್ನು ಸದ್ಯದಲ್ಲೇ ಪತ್ತೆ ಹಚ್ಚುವುದಾಗಿ ಆರ್.ಅಶೋಕ್ ಹೇಳಿದ್ದಾರೆ. ಒಟ್ಟು ಅಡ್ಡಮತದಾನವಾಗಿದ್ದದ್ದು ಎಷ್ಟು ಎನ್ನುವ ಬಗ್ಗೆಯೂ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಕೆಲವರು ಮೂವರು, ಇನ್ನು ಕೆಲವರು ನಾಲ್ಕು ಅಂತಿದ್ದಾರೆ. ಒಟ್ಟಿನಲ್ಲಿ, ಬಿಜೆಪಿ – ಜೆಡಿಎಸ್ ಸೇರಿ ಹನ್ನೊಂದು ಅಡ್ಡಮತದಾನಗಳಾಗಿವೆ.
ಹೊಂದಾಣಿಕೆ ರಾಜಕೀಯದಿಂದ ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿ ಗೆಲುವು ಸಾಧಿಸಿದ್ರಾ?
ರಾಜ್ಯ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ, ಹೊಂದಾಣಿಕೆ ರಾಜಕೀಯದ ಬಗ್ಗೆ ಭಾರೀ ಅಸಮಾಧಾವಿದೆ. ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿಗೆ 32 ಮತಗಳು ಬೀಳಲು ಹೇಗೆ ಸಾಧ್ಯ? ಈ ಅಡ್ಡ ಮತದಾನದ ಹಿನ್ನಡೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು ಯಾರು? ಈ ಚುನಾವಣೆಯಲ್ಲೂ ಹೊಂದಾಣಿಕೆ ನಡೆದಿದೆಯಾ ಎನ್ನುವ ಪ್ರಶ್ನೆ, ಬಿಜೆಪಿಗರಿಗೆ ಆರಂಭವಾಗಿದೆ.
ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಬಗ್ಗೆ ಉಲ್ಲೇಖಿಸುತ್ತಲೇ ಇರುತ್ತಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು, ಟ್ರೈನಿಂಗ್ ಕೊಟ್ಟರೂ, ಬಿಜೆಪಿಯ ಒಬ್ಬರ ಮತ ಅಸಿಂಧುಗೊಂಡಿದ್ದು ಹೇಗೆ ಎನ್ನುವುದು ಚರ್ಚೆಯ ವಿಷಯವಾಗಿದೆ.
ನನ್ನ ರಾಜಕೀಯನೇ ಬೇರೆ ಎಂದು ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದರೇ?
ಅಡ್ಡ ಮತದಾನ ಮಾಡಿದವರನ್ನು ಪತ್ತೆಹೆಚ್ಚಿ, ಬಿಜೆಪಿ ಶಿಸ್ತಿನ ಕ್ರಮವನ್ನೇನೋ ತೆಗೆದುಕೊಳ್ಳಬಹುದು. ಆದರೆ, ಸದ್ಯದ ಮಟ್ಟಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ಜೊತೆಗೆ, ಬೇರೆಯವರು ಮಾಡುವ ರಾಜಕೀಯ ಬೇರೆ, ನನ್ನ ಪಾಲಿಟಿಕ್ಸ್ ಬೇರೆ ಎನ್ನುವುದನ್ನು ಬಿಜೆಪಿ ವರಿಷ್ಠರಿಗೆ ಸಾರಿದಂತಿದೆ. ಇನ್ನೊಂದು ಕಡೆ, ಪ್ರಮುಖವಾಗಿ ವಿಜಯೇಂದ್ರ ಮತ್ತು ಆರ್.ಅಶೋಕ್, ಈಗಾಗಲೇ ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಡ್ಡ ಮತದಾನದ ಬಗ್ಗೆ ವಿಧಾನಸೌಧದಿಂದಲೇ, ವರಿಷ್ಠರಿಗೆ ವಿಜಯೇಂದ್ರ ಮಾಹಿತಿಯನ್ನು ನೀಡಿದ್ದಾರೆ. ಆದರೆ, ಇರುವ ಶಾಸಕರನ್ನು ಜೊತೆಯಾಗಿ ಕರೆದುಕೊಂಡು ಹೋಗುವಲ್ಲಿ ಮತ್ತು ಯೋಜನಾಬದ್ದ ಪ್ಲ್ಯಾನ್ ಮಾಡುವಲ್ಲಿ ವಿಜಯೇಂದ್ರ ಮತ್ತು ಅಶೋಕ್, ವಿಫಲರಾಗಿದ್ದಾರೆ ಎನ್ನುವುದು ಸ್ಪಷ್ಟ. ಇದು, ಮುಂದಿನ ದಿನಗಳಲ್ಲಿ ವಿಜಯೇಂದ್ರ ಮತ್ತು ಅಶೋಕ್, ತಲೆದಂಡಕ್ಕೆ ಒತ್ತಾಯ ಮತ್ತು ಒತ್ತಡ ಹೆಚ್ಚಾಗುವುದಕ್ಕೆ ಕಾರಣವಾಗಬಹುದು. ಯಾಕೆಂದರೆ, ಕರ್ನಾಟಕ ಬಿಜೆಪಿಯ ಕ್ರಾಸ್ ವೋಟಿಂಗ್ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯನ್ನು ಮಾಡುತ್ತಿದೆ.