newsics.com/ನ್ಯೂಸಿಕ್ಸ್
ಜೂನ್ 21 ರಂದು ನಡೆಯಲಿರುವ NEET-UG 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆಯಪ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್ 19) ಎತ್ತಿಹಿಡಿದಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69A ಅಡಿಯಲ್ಲಿ ಟೆಲಿಗ್ರಾಂನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಪೂರ್ಣ ಅಧಿಕಾರವಿದೆ ಎಂದು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ರಜಾಕಾಲದ ಪೀಠವು ತೀರ್ಪು ನೀಡಿದೆ. “ಸರ್ಕಾರದ ಆದೇಶವು ಸೂಕ್ತ ಆಧಾರಗಳಿಂದ ಕೂಡಿದೆ. ಕಾನೂನಿನ ಚೌಕಟ್ಟಿನಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅಸಮಂಜಸವಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
150 ಮಿಲಿಯನ್ ಬಳಕೆದಾರರ ಹಕ್ಕು:
ಇದಕ್ಕೂ ಮುನ್ನ ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, “ಕೆಲವೇ ಕೆಲವು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಕಾರಣಕ್ಕೆ, ಭಾರತದಲ್ಲಿರುವ ಬರೋಬ್ಬರಿ 150 ಮಿಲಿಯನ್ (15 ಕೋಟಿ) ಟೆಲಿಗ್ರಾಂ ಬಳಕೆದಾರರ ಹಕ್ಕನ್ನು ಹೇಗೆ ಕಸಿದುಕೊಳ್ಳಲು ಸಾಧ್ಯ?” ಎಂದು ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಟೆಲಿಗ್ರಾಂ ಪರ ಹಿರಿಯ ವಕೀಲ ಧ್ರುವ್ ಮೆಹ್ತಾ ಹಾಗೂ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುದೀರ್ಘ ವಾದ-ಪ್ರತಿವಾದ ಮಂಡಿಸಿದ ನಂತರ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು.
ಟೆಲಿಗ್ರಾಂ ನಿರ್ಬಂಧಕ್ಕೆ ಕಾರಣವೇನು?
ಮೇ 3 ರಂದು ನಡೆದಿದ್ದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಾದ NEET-UG ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಮೇ 12 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಸಿಬಿಐ (CBI) ನಡೆಸುತ್ತಿದೆ.
ಜೂನ್ 21 ರಂದು ಮರುಪರೀಕ್ಷೆ ನಡೆಯಲಿದ್ದು, ಈ ಅವಧಿಯಲ್ಲಿ ಯಾವುದೇ ಅಕ್ರಮಗಳು ಅಥವಾ ಪೇಪರ್ ಲೀಕ್ ವದಂತಿಗಳು ಹರಡದಂತೆ ತಡೆಯಲು NTA ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಕಠಿಣ ಕ್ರಮ ಕೈಗೊಂಡಿದೆ.
ಸರ್ಕಾರದ ಪ್ರಮುಖ ಆದೇಶಗಳು:
ತಾತ್ಕಾಲಿಕ ನಿಷೇಧ: NEET-UG 2026 ಮರುಪರೀಕ್ಷೆ ಮತ್ತು ಅದರ ಮರುದಿನದ ಮುನ್ನೆಚ್ಚರಿಕೆಯಾಗಿ ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಮೆಸೇಜ್ ಎಡಿಟ್ ವೈಶಿಷ್ಟ್ಯಕ್ಕೆ ಬ್ರೇಕ್: ಯಾವುದೇ ತಪ್ಪು ಮಾಹಿತಿ ಅಥವಾ ಲೀಕ್ ಆದ ದಾಖಲೆಗಳನ್ನು ಎಡಿಟ್ ಮಾಡಿ ಹರಡುವುದನ್ನು ತಡೆಯಲು, ಜೂನ್ 30 ರವರೆಗೆ ಭಾರತದಲ್ಲಿ ಟೆಲಿಗ್ರಾಂನ ‘ಮೆಸೇಜ್-ಎಡಿಟಿಂಗ್’ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ ಸಚಿವಾಲಯವು ವೇದಿಕೆಗೆ ನಿರ್ದೇಶನ ನೀಡಿದೆ.
ಟ್ರಾನ್ಸ್ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು