newsics.com/ನ್ಯೂಸಿಕ್ಸ್
ಕಳೆದ ಕೆಲವು ತಿಂಗಳುಗಳಿಂದ ತಮ್ಮ ಖಾಸಗಿ ಬದುಕಿನ ಬಗ್ಗೆ ಹರಿದಾಡಿದ ಸುದ್ದಿಗಳು ಮತ್ತು ವೈಯಕ್ತಿಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ತಮ್ಮ ಜೀವನ ಸಂಪೂರ್ಣ ಬದಲಾಗಿದೆ ಎಂದು ಕೃಷಿ ತಾಪಂಡ ಹೇಳಿದ್ದಾರೆ. ತಮ್ಮ ಹಾಗೂ ಉದ್ಯಮಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿತ್ತು. ಆದರೆ ಸಮಯ ಕಳೆದಂತೆ ಸಂಬಂಧದಲ್ಲಿ ಅಂತರ ಹೆಚ್ಚಾಯಿತು ಎಂದು ಹೇಳಿದ್ದಾರೆ.
ನನಗೆ ಉಡುಗೊರೆಗಳು ಸಿಕ್ಕಿವೆ, ಹಣ ಸಿಕ್ಕಿದೆ. ಆದರೆ ಪ್ರೀತಿ ಮತ್ತು ಸಮಯ ಸಿಗಲಿಲ್ಲ. ಅದೇ ನನಗೆ ಹೆಚ್ಚು ನೋವು ಕೊಟ್ಟದ್ದು ಎಂದು ಕೃಷಿ ತಾಪಂಡ ಹೇಳಿದ್ದಾರೆ. ಸಂಬಂಧದಲ್ಲಿ ಉಂಟಾದ ಸಮಸ್ಯೆಗಳು ದೊಡ್ಡ ಮಟ್ಟದ ಭಿನ್ನಾಭಿಪ್ರಾಯಕ್ಕೆ ಕಾರಣವಾದವು. ಖಾಸಗಿ ಬದುಕಿನಲ್ಲಿ ನಡೆದ ಘಟನೆಗಳು ಸಾರ್ವಜನಿಕ ಚರ್ಚೆಯಾಗಿ ಮಾರ್ಪಟ್ಟವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ಉಳಿಯಬೇಕಿದ್ದ ವಿಷಯ ಬೀದಿಗೆ ಬಂತು. ಜನರು ನನ್ನ ಹಲವು ವರ್ಷದ ಪಯಣ ಮರೆತು, ಕಳೆದ ಕೆಲವು ತಿಂಗಳ ಘಟನೆಗಳಿಂದಲೇ ನನ್ನನ್ನು ಅಳೆಯುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಈ ಘಟನೆಗಳಿಂದ ಕೆಲಸದ ಅವಕಾಶಗಳೂ ಕಡಿಮೆಯಾದವು. ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು ಎಂದು ಹೇಳಿದ ಕೃಷಿ ತಾಪಂಡ, ಕಳೆದ ಎರಡು ವರ್ಷಗಳಿಂದ ಹೊರಜಗತ್ತಿನಿಂದ ದೂರವಾಗಿದ್ದೇನೆ ಎಂದಿದ್ದಾರೆ.
ಇದೇ ನನ್ನ ಕೊನೆಯ ಸಂದರ್ಶನ. ಇನ್ನು ಮುಂದೆ ಯಾವ ಕ್ಯಾಮೆರಾ ಮುಂದೆಯೂ ಬರಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ ಎಂದು ಭಾವುಕರಾಗಿ ಕೃಷಿ ತಾಪಂಡ ಮನವಿ ಮಾಡಿದ್ದಾರೆ. ಇನ್ನೂ ತಮ್ಮ ಹೆಸರಿನಲ್ಲಿ ದುಬಾರಿ ಆಸ್ತಿ ಅಥವಾ ಐಷಾರಾಮಿ ಜೀವನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.