newsics.com | ನ್ಯೂಸಿಕ್ಸ್
ಬೆಂಗಳೂರು: ಎಲ್ ನಿನೊ ಪರಿಣಾಮದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರ ಮೌಲ್ಯಮಾಪನ ಮಾಡಲು ಕರ್ನಾಟಕಕ್ಕೆ ಕೇಂದ್ರದ ಪರಿಶೀಲನಾ ತಂಡವನ್ನು ಕಳುಹಿಸಿಕೊಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಪ್ರಧಾನಿಗೆ ಬರೆದ ಪತ್ರದಲ್ಲಿ ಕರ್ನಾಟಕ ತನ್ನ ಸ್ವಾಭಾವಿಕ ಕೃಷಿ-ಹವಾಮಾನ ಮತ್ತು ಜಲವಿಜ್ಞಾನದ ಗುಣಲಕ್ಷಣಗಳಿಂದಾಗಿ ದೇಶದಲ್ಲೇ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ನೆಲೆಗೊಂಡಿದೆ. ರಾಜ್ಯ 10 ಪ್ರತ್ಯೇಕ ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77ರಷ್ಟು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಸುಮಾರು 84.79 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿ ಇದೆ, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಅತಿ ಹೆಚ್ಚು ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ. ಇದು ಸ್ಥಳೀಯ ಕೃಷಿ ಉತ್ಪಾದನೆಯು ಮುಂಗಾರು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡಿದೆ ಎಂದು ವಿವರಿಸಲಾಗಿದೆ.
ರಾಜ್ಯದ ವಾರ್ಷಿಕ ಮಳೆಯ ಸುಮಾರು 74% ಭಾಗವು ನೈಋತ್ಯ ಮುಂಗಾರು ಅವಧಿಯಲ್ಲಿಯೇ ಲಭ್ಯವಾಗುತ್ತದೆ. ಇದು ಕರ್ನಾಟಕವನ್ನು ಮಳೆಯ ವ್ಯತ್ಯಾಸ, ಸುದೀರ್ಘ ಒಣ ಹವೆ ಮತ್ತು ಮರುಕಳಿಸುವ ಬರಗಾಲದ ಅಪಾಯಕ್ಕೆ ಸಿಲುಕುವಂತೆ ಮಾಡುತ್ತದೆ. ಇದು ಕೃಷಿ ಕುಡಿಯುವ ನೀರಿನ ಲಭ್ಯತೆ, ಗ್ರಾಮೀಣ ಜನರ ಜೀವನೋಪಾಯ ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಒಳಗೊಂಡಿತ್ತು.
ಎಲ್ ನಿನೋದಿಂದ 2026 ರ ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ ದೀರ್ಘಾವಧಿ ಮುನ್ಸೂಚನೆಗೆ ಅನುಗುಣವಾಗಿ, ರಾಜ್ಯ ಗಣನೀಯ ಪ್ರಮಾಣದ ಮಳೆ ಕೊರತೆಯನ್ನು ಎದುರಿಸುತ್ತಿದೆ.
11 ಜುಲೈ 2026 ರ ಹೊತ್ತಿಗೆ, ಕರ್ನಾಟಕ ಸಾಮಾನ್ಯ ಮಳೆಯಾದ 292 ಮಿಲಿಮೀಟರ್ಗೆ ಬದಲಾಗಿ ಕೇವಲ 203 ಮಿಲಿಮೀಟರ್ ಮಳೆಯನ್ನು ಪಡೆದಿದ್ದು, ಶೇಕಡಾ 30% ಮಳೆ ಕೊರತೆಯನ್ನು ದಾಖಲಿಸಿದೆ. ಇದು ‘ಕೊರತೆ ಮಳೆ’ ವರ್ಗದ ಅಡಿಯಲ್ಲಿ ಬರುತ್ತದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರಿನ ಪ್ರಗತಿಯು ಮಂದಗತಿಯಲ್ಲಿದೆ ಎಂದು ಸಿಎಂ ವಿವರಿಸಿದ್ದಾರೆ.
US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ
8th pay commission ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ