newsics.com | ನ್ಯೂಸಿಕ್ಸ್
ಬೆಂಗಳೂರಿನಲ್ಲಿ ಈಗ ಹೊಸದೊಂದು ಟ್ರೆಂಡ್ ಸೃಷ್ಟಿಯಾಗಿದೆ. ಆಫೀಸ್ನಲ್ಲಿ ಪ್ರಮೋಷನ್ ಸಿಗಬೇಕು, ಬಂಪರ್ ಸ್ಯಾಲರಿ ಹೈಕ್ ಆಗಬೇಕು, ಲೇ-ಆಫ್ ಭೀತಿಯಿಂದ ಪಾರಾಗಬೇಕು ಎಂದು ಸಿಲಿಕಾನ್ ಸಿಟಿಯ ಸಾಫ್ಟ್ವೇರ್ ಇಂಜಿನಿಯರ್ಗಳು ಈಗ ದೇವಸ್ಥಾನಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರಂತೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಸನ್ನ ಗಣೇಶ ದೇವಸ್ಥಾನ ಈಗ ಇಂತಹದ್ದೇ ಒಂದು ವಿಚಿತ್ರ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ದೇವಸ್ಥಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ಟೆಕ್ಕಿ ಗಣೇಶ ಎಂದೇ ಹೆಸರಿಡಲಾಗಿದ್ದು, ಐಟಿ ಮಂದಿಯ ದಂಡೇ ಇಲ್ಲಿಗೆ ಹರಿದುಬರುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ಈ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಯುವಕ-ಯುವತಿಯರು ತಮ್ಮ ಕೆರಿಯರ್ ಚೆನ್ನಾಗಿರಲಿ, ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗಲಿ ಎಂದು ಈ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಇಲ್ಲಿ ಬಂದು ಪ್ರಾರ್ಥನೆ ಮಾಡಿದರೆ ಖಂಡಿತವಾಗಿಯೂ ಉದ್ಯೋಗದಲ್ಲಿ ಏಳಿಗೆಯಾಗುತ್ತದೆ ಎಂಬ ಬಲವಾದ ನಂಬಿಕೆ ಐಟಿ ವಲಯದಲ್ಲಿ ಹರಡಿದೆ. ಆದರೆ, ಇದ್ದಕ್ಕಿದ್ದಂತೆ ಶುರುವಾದ ಈ ಭಾರೀ ಜನಜಂಗುಳಿಯಿಂದಾಗಿ ದೇವಸ್ಥಾನದ ಸುತ್ತಮುತ್ತ ವಾಸಿಸುವ ಸ್ಥಳೀಯ ನಿವಾಸಿಗಳು ಮಾತ್ರ ಕೊಂಚ ಬೇಸರ ಹೊರಹಾಕಿದ್ದಾರೆ. ಸದಾ ಶಾಂತವಾಗಿದ್ದ ದೇವಸ್ಥಾನದ ಪರಿಸರ ಈಗ ಕಮರ್ಷಿಯಲ್ ಆಗಿ ಬದಲಾಗುತ್ತಿದೆ ಎನ್ನುವುದು ಹಳೇ ನಿವಾಸಿಗಳ ಅಳಲು.
ಈ ಇಡೀ ಚರ್ಚೆ ಮುನ್ನೆಲೆಗೆ ಬಂದಿದ್ದು ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ ಒಂದು ವಿಡಿಯೋದಿಂದ. ಆ ರೀಲ್ಸ್ನಲ್ಲಿ ದೇವಸ್ಥಾನದ ಮುಂದೆ ಸಾಫ್ಟ್ವೇರ್ ಉದ್ಯೋಗಿಗಳು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿರುವುದನ್ನು ತೋರಿಸಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ತರಹೇವಾರಿ ಕಮೆಂಟ್ ಮಾಡಲು ಶುರು ಮಾಡಿದ್ದಾರೆ.
ಒಬ್ಬ ಬಳಕೆದಾರರು ಕಮೆಂಟ್ ಮಾಡಿ, ಕಂಪನಿ ಬಾಸ್ಗಳಿಗಿಂತ ಈ ವಿಘ್ನೇಶ್ವರನೇ ವಾಸಿ, ಇನ್ಕ್ರಿಮೆಂಟ್ ಆದ್ರೂ ಕೊಡ್ತಾನೆ ಎಂದು ತಮಾಷೆ ಮಾಡಿದರೆ, ಮತ್ತೊಬ್ಬರು “ಐಟಿ ಕಂಪನಿಗಳ ಪ್ರೆಶರ್ ತಡೆಯಲಾರದೆ ಟೆಕ್ಕಿಗಳು ಕೊನೆಗೆ ದೇವರ ಮೊರೆ ಹೋಗುತ್ತಿದ್ದಾರೆ ಎಂದು ಇಂದಿನ ಸಾಫ್ಟ್ವೇರ್ ಲೈಫ್ಸ್ಟೈಲ್ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ಟಾರ್ಗೆಟ್ ರೀಚ್ ಮಾಡೋ ಭರದಲ್ಲಿ ಬೆಂಚ್ ಮೇಲಿರೋ ಟೆಕ್ಕಿಗಳಿಗೆ ಈಗ ಕೋರಮಂಗಲದ ಈ ಟೆಕ್ಕಿ ಗಣೇಶನೇ ಏಕೈಕ ಭರವಸೆಯಾಗಿದ್ದಾನೆ.
https://www.instagram.com/reel/DaabXf5hL_8/?igsh=bnJxbGxlMjVsMDI1