newsics.com | ನ್ಯೂಸಿಕ್ಸ್
ಕಡಪ(ಆಂಧ್ರ ಪ್ರದೇಶ): ಮಾಜಿ ಸಚಿವ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಣಿ ಸ್ಟೀಲ್ಸ್ಗೆ ಹಂಚಿಕೆ ಮಾಡಲಾಗಿದ್ದ ಸುಮಾರು 14 ಸಾವಿರ ಎಕರೆ ಭೂಮಿಯನ್ನು 18 ವರ್ಷಗಳ ಕಾನೂನು ಹೋರಾಟದ ನಂತರ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಎಸ್ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂನಲ್ಲಿ ಮಂಜೂರು ಮಾಡಲಾಗಿದ್ದ 14 ಸಾವಿರ ಎಕರೆ ಭೂಮಿಯನ್ನು ಉದ್ದೇಶಿತ ಕಾರ್ಯಕ್ಕೆ ಬಳಸದ ಕಾರಣ ಕಂದಾಯ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು 5 ಸಾವಿರ ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಗುರುವಾರ ರಾತ್ರಿ ಜಿಲ್ಲಾಧಿಕಾರಿ ಚೆರುಕುರಿ ಶ್ರೀಧರ್ ಅವರು ಹೊರಡಿಸಿದ ಆದೇಶದ ನಂತರ ಸ್ವಾಧೀನ ಪ್ರಕ್ರಿಯೆಯು ಮುಕ್ತಾಯಗೊಂಡಿತು. ಇದು ಭವಿಷ್ಯದ ಕೈಗಾರಿಕಾ ಅಗತ್ಯಗಳಿಗಾಗಿ ಈ ಭೂಮಿಯನ್ನು ಬಳಸಲು ದಾರಿ ಮಾಡಿಕೊಟ್ಟಿತು.
2011ರಲ್ಲಿ ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂದಿನ ಸರ್ಕಾರ ಆದೇಶ ಹೊರಡಿಸಿದ್ದರೂ, ಸ್ವಾಧೀನ ಪ್ರಕ್ರಿಯೆ ನಡೆಯಲಿಲ್ಲ. ನಂತರ ಜಿಲ್ಲಾಧಿಕಾರಿ ಕಾನೂನು ವಿವಾದಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಮ್ಮಲಮಡುಗು ಪ್ರದೇಶದಲ್ಲಿ ಮೆಗಾ ಸ್ಟೀಲ್ ಘಟಕ ಸ್ಥಾಪಿಸಲು ಈ ಭೂಮಿಯನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಬ್ರಾಹ್ಮಣಿ ಸ್ಟೀಲ್ಸ್ಗೆ 2007 ರಲ್ಲಿ ಆಂಧ್ರ ಸರ್ಕಾರ ಮಂಜೂರು ಮಾಡಿತ್ತು.
ಸ್ಟೀಲ್ ಪ್ಲಾಂಟ್ಗೆ 10,700 ಎಕರೆ ಮೀಸಲಿಟ್ಟಿದ್ದರೆ, 3,115 ಎಕರೆಗಳನ್ನು ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಅಂದಿನ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರ ಹಠಾತ್ ನಿಧನ ಮತ್ತು ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳು, ಕಾನೂನು ವಿವಾದಗಳು ಮತ್ತು ಸರ್ಕಾರಿ ನಿರ್ಧಾರಗಳಲ್ಲಿನ ಬದಲಾವಣೆಗಳಿಂದಾಗಿ ಯೋಜನೆಯು ಸ್ಥಗಿತಗೊಂಡಿತು.
2008ರಲ್ಲಿ ಆಗಿನ ಸರ್ಕಾರವು ಬ್ರಾಹ್ಮಣಿ ಇಂಡಸ್ಟ್ರೀಸ್ ವಾಣಿಜ್ಯ ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಮತ್ತು ವಾಯುಯಾನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗಾಗಿ ಎಕರೆಗೆ 25 ಸಾವಿರ ರೂ.ಗಳಂತೆ 3,115.64 ಎಕರೆಗಳನ್ನು ಮಂಜೂರು ಮಾಡಿತ್ತು. ಭೂಮಿಯನ್ನು ಮಂಜೂರು ಮಾಡಲಾಗಿದ್ದರೂ, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿಲ್ಲ. ಪ್ರಸ್ತುತ, ಸಂಪೂರ್ಣ ಭೂಮಿ ಬಳಕೆಯಾಗದೇ ಉಳಿದಿದೆ.
ಸಂಸ್ಥೆ ಉದ್ದೇಶಿತ ಕಾರ್ಯಕ್ಕೆ ಭೂಮಿ ಬಳಸದ ಕಾರಣ, ನಿಯಮಗಳ ಪ್ರಕಾರ ಮಂಜೂರಾತಿಯನ್ನು ರದ್ದುಗೊಳಿಸಿ ಸರ್ಕಾರದಿಂದ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳು ಜಮ್ಮಲಮಡುಗು ತಹಶೀಲ್ದಾರ್ ಅವರಿಗೆ 48 ಗಂಟೆಗಳೊಳಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿದ್ದರು. ವೆಬ್ಲ್ಯಾಂಡ್, ಅಡಂಗಲ್, 1-ಬಿ ದಾಖಲೆಗಳಲ್ಲಿ ಭೂಮಿಯನ್ನು ಮತ್ತೆ ಸರ್ಕಾರಿ ಭೂಮಿಯಾಗಿ ನೋಂದಾಯಿಸಲಾಗಿದೆ. ಸದ್ಯ ಯಾವುದೇ ನೋಂದಣಿ ಅಥವಾ ಗುತ್ತಿಗೆಗಳನ್ನು ನಡೆಸದಂತೆ ಜಿಲ್ಲಾ ನೋಂದಣಾಧಿಕಾರಿಗೆ ಆದೇಶಿಸಲಾಗಿದೆ.
Ceremonial Code ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಗಾಯನಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಕಡ್ಡಾಯ ಪಾಲನೆಗೆ ಸೂಚನೆ