newsics.com | ನ್ಯೂಸಿಕ್ಸ್
ಬೆಂಗಳೂರು: ಯುವತಿಯೊಬ್ಬಳನ್ನು ಪಾರ್ಟಿಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ನಗರದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ದೇವನಹಳ್ಳಿ ಮೂಲದ ಸಂತ್ರಸ್ತ ಯುವತಿಗೆ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಯುವಕರು ಮೊದಲೇ ಪರಿಚಿತರಾಗಿದ್ದರು. ಆರೋಪಿಗಳಲ್ಲೊಬ್ಬನಾದ ಸೋಮಶೇಖರ್ ಎಂಬಾತ, “ಕಲಬುರ್ಗಿಯಿಂದ ನಮ್ಮ ಗೆಳೆಯರು ಬಂದಿದ್ದಾರೆ, ಎಲ್ಲರೂ ಸೇರಿ ಪಾರ್ಟಿ ಮಾಡೋಣ” ಎಂದು ನಂಬಿಸಿ ಯುವತಿಯನ್ನು ತಲಘಟ್ಟಪುರಕ್ಕೆ ಕರೆಸಿಕೊಂಡಿದ್ದಾನೆ.
ಆರೋಪಿಗಳು ಇದ್ದ ಜಾಗದಲ್ಲಿ ಐವರು ಯುವಕರು ಒಟ್ಟಾಗಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಅಂಬರೀಶ ಎಂಬ ಕಾಮುಕ ಯುವತಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಪೈಶಾಚಿಕ ದಾಳಿಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ, ಧೈರ್ಯ ಕಳೆದುಕೊಳ್ಳದೆ ಕಾಮುಕರ ಹಿಡಿತದಿಂದ ಹೇಗೋ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾಳೆ. ರಸ್ತೆಗಿಳಿಯುತ್ತಿದ್ದಂತೆ ತಕ್ಷಣ ಜಾಗರೂಕತೆಯಿಂದ ಪೊಲೀಸರ ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿ ತನಗಾದ ಘೋರ ಅನ್ಯಾಯವನ್ನು ವಿವರಿಸಿದ್ದಾಳೆ.
ಯುವತಿಯಿಂದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಅಲರ್ಟ್ ಆದ ತಲಘಟ್ಟಪುರ ಪೊಲೀಸರು ಜಿಪಿಎಸ್ ನೆರವಿನಿಂದ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿದ್ದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಖಾಕಿ ಪಡೆ, ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಮುಖ್ಯ ಆರೋಪಿಗಳಾದ ಅಂಬರೀಶ, ಸೋಮಶೇಖರ್ ಸೇರಿದಂತೆ ಐದೂ ಜನರನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಐವರ ವಿರುದ್ಧ ಕಠಿಣ ಕಾನೂನು ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.
BMTC Bus: ಸಿಗ್ನಲ್ನಲ್ಲಿದ್ದ ವಾಯುವಜ್ರ ಬಸ್ಗೆ ಬಿಎಂಟಿಸಿ ಡಿಕ್ಕಿ; ಚಾಲಕನ ಸ್ಥಿತಿ ಚಿಂತಾಜನಕ!