newsics.com | ನ್ಯೂಸಿಕ್ಸ್
ಬೆಂಗಳೂರು: ಆಕ್ರಮಿತ ಟಿಬೆಟ್ ಪ್ರಾಂತ್ಯದ ಮೇಲೆ ತನ್ನ ಸರ್ವಾಧಿಕಾರಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಚೀನಾ ಸರ್ಕಾರವು ವಿವಾದಾತ್ಮಕ ‘ಜನಾಂಗೀಯ ಏಕತೆ ಮತ್ತು ಪ್ರಗತಿ ಕಾಯ್ದೆ’ಯನ್ನು (Ethnic Unity and Progress Law) ಅಧಿಕೃತವಾಗಿ ಜಾರಿಗೆ ತಂದಿದೆ.
ಹೌದು, ಜುಲೈ 1 ರಿಂದ ಜಾರಿಗೆ ಬಂದಿರುವ ಈ ಹೊಸ ಕಾನೂನು, ಟಿಬೆಟಿಯನ್ ಸೇರಿದಂತೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ಭಾಷೆ, ವಿಶಿಷ್ಟ ಸಂಸ್ಕೃತಿ ಮತ್ತು ಮೂಲ ಗುರುತನ್ನು ಸಂಪೂರ್ಣವಾಗಿ ನಾಶಪಡಿಸುವ ವ್ಯವಸ್ಥಿತ ಸಂಚು ಎಂದು ಜಾಗತಿಕ ರಾಜತಾಂತ್ರಿಕ ತಜ್ಞರು ಹಾಗೂ ಟಿಬೆಟ್ನ ಗಡೀಪಾರು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿವೆ.
ಏನಿದು ‘ಬಲವಂತದ ಚೀನೀಕರಣ’ ನೀತಿ?
ಕಮ್ಯುನಿಸ್ಟ್ ಚೀನಾ ಅಂಗೀಕರಿಸಿರುವ ಈ ಹೊಸ ನಿಯಮಾವಳಿಗಳಲ್ಲಿ “ಚೀನೀ ರಾಷ್ಟ್ರದ ಸಮುದಾಯದ ಭಾವನೆ” ಎಂಬ ಪದವನ್ನು ಪದೇ ಪದೇ ಬಳಸಲಾಗಿದೆ. ಇದು ಮೂಲ ಟಿಬೆಟಿಯನ್ನರನ್ನು ಬಲವಂತವಾಗಿ ‘ಹಾನ್ ಚೀನೀಕರಣ’ (Sinisisation) ಪ್ರಕ್ರಿಯೆಗೆ ಒಳಪಡಿಸಲು ನೀಡಲಾದ ಕಾನೂನುಬದ್ಧ ಪರವಾನಗಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕಾನೂನಿನ ಅಡಿಯಲ್ಲಿ ಪ್ರಿ-ಸ್ಕೂಲ್ ಹಂತದಿಂದಲೇ ಮಕ್ಕಳಿಗೆ ಮಂಡರಿನ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಮ್ಯುನಿಸ್ಟ್ ಪಾರ್ಟಿ ಹಾಗೂ ದೇಶದ ಬಗ್ಗೆ ನಿಷ್ಠೆ ಬೆಳೆಸುವುದನ್ನು ಕಡ್ಡಾಯ ಮಾಡಲಾಗಿದ್ದು, ಸರ್ಕಾರದ ದೃಷ್ಟಿಕೋನಕ್ಕೆ ಭಿನ್ನವಾದ ಯಾವುದೇ ನಿಲುವನ್ನು ದೇಶದ್ರೋಹದ ಅಪರಾಧ ಎಂದು ಪರಿಗಣಿಸಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಸಾಹತುಶಾಹಿ ಶೈಲಿಯ ಬೋರ್ಡಿಂಗ್ ಶಾಲೆಗಳಲ್ಲಿ ಬಂಧಿಯಾಗಿರುವ ಸುಮಾರು ೧೦ ಲಕ್ಷ ಟಿಬೆಟಿಯನ್ ಮಕ್ಕಳ ಸಾಂಸ್ಕೃತಿಕ ಬೇರುಗಳನ್ನು ಕತ್ತರಿಸುವ ಚೀನಾದ ದಬ್ಬಾಳಿಕೆಗೆ ಈ ಕಾಯ್ದೆ ಈಗ ಅಧಿಕೃತ ಮುದ್ರೆ ಒತ್ತಿದೆ ಎಂದು ಚೀನಾ ವಿದ್ಯಮಾನಗಳ ತಜ್ಞೆ ಶ್ರೀಪರ್ಣಾ ಪಾಠಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಚೀನಾದ ಈ ಆಕ್ರಮಣಕಾರಿ ಕಾನೂನು ಕರ್ನಾಟಕದಲ್ಲಿ ನೆಲೆಸಿರುವ ಟಿಬೆಟಿಯನ್ ನಿರಾಶ್ರಿತರಲ್ಲಿ ಭಾರಿ ಆತಂಕ ಮೂಡಿಸಿದೆ. ಮೈಸೂರು ಜಿಲ್ಲೆಯ ಬೈಲಕುಪ್ಪೆಯು (ಲಗ್ಸಮ್ ಸಮ್ದುಪ್ಲಿಂಗ್) ವಿಶ್ವದ ಅತ್ಯಂತ ದೊಡ್ಡ ಟಿಬೆಟಿಯನ್ ವಸಾಹತಾಗಿದ್ದು, ಸುಮಾರು 7೦, ೦೦೦ ಕ್ಕೂ ಹೆಚ್ಚು ಟಿಬೆಟಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಪ್ರಸಿದ್ಧ ಗೋಲ್ಡನ್ ಟೆಂಪಲ್ (ನಮ್ಡ್ರೋಲಿಂಗ್), ವಿವಿಧ ಬೌದ್ಧ ಮಠಗಳು ಹಾಗೂ ಶಿಕ್ಷಣ ಸಂಸ್ಥೆಗಳು ಟಿಬೆಟಿಯನ್ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ.
ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (ಡೋಗುಲಿಂಗ್) ವಸಾಹತಿನಲ್ಲೂ 15, ೦೦೦ ಕ್ಕೂ ಹೆಚ್ಚು ಟಿಬೆಟಿಯನ್ನರು ವಾಸಿಸುತ್ತಿದ್ದು, ಡ್ರೆಪುಂಗ್ ಮತ್ತು ಗಡೆನ್ ಮಠಗಳ ಮೂಲಕ ತಮ್ಮ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಗಣಹೋಮವನ್ನು ವಿರೋಧಿಸಿ ಬೈಲಕುಪ್ಪೆ ಮತ್ತು ಮುಂಡಗೋಡಿನಲ್ಲಿ ಟಿಬೆಟಿಯನ್ ಜನಾಂಗದವರು ಭಾರಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು, ತಮ್ಮ ಅಸ್ತಿತ್ವದ ರಕ್ಷಣೆಗೆ ಜಾಗತಿಕ ಸಮುದಾಯ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.
ಟಿಬೆಟ್ ಗಡೀಪಾರು ಸರ್ಕಾರದ ಸಿಕ್ಯೋಂಗ್ (ಅಧ್ಯಕ್ಷ) ಪೆಂಪಾ ತ್ಸೆರಿಂಗ್ ಅವರು ಚೀನಾದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಈ ಕರಾಳ ಕಾನೂನು ಚೀನಾ ಸರ್ಕಾರದ ಆಂತರಿಕ ಅಸ್ಥಿರತೆಯ ಭಯದಿಂದ ಹುಟ್ಟಿಕೊಂಡಿದ್ದಾಗಿದೆ. ಇದು ಟಿಬೆಟಿಯನ್ನರ ಮೂಲಭೂತ ಹಾಗೂ ಸ್ವಾಭಾವಿಕ ಹಕ್ಕುಗಳ ಮೇಲಿನ ನೇರ ದಾಳಿ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ, ಈ ಕಾನೂನು ದೇಶದ ಐಕ್ಯತೆಗೆ ಪೂರಕ ಎಂದು ಚೀನಾ ವಾದಿಸುತ್ತಿದ್ದರೂ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಇದನ್ನು ಅಲ್ಪಸಂಖ್ಯಾತರನ್ನು ಹತ್ತಿಕ್ಕುವ ಕ್ರೂರ ಅಸ್ತ್ರ ಎಂದು ಕರೆದಿವೆ. ಕಮ್ಯುನಿಸ್ಟ್ ಸರ್ಕಾರದ ಈ ದಬ್ಬಾಳಿಕೆಯ ನಡುವೆಯೂ ಕರ್ನಾಟಕದಲ್ಲಿರುವ ಟಿಬೆಟಿಯನ್ ಸಮುದಾಯವು ಒಗ್ಗಟ್ಟಿನಿಂದ ತಮ್ಮ ಸಂಸ್ಕೃತಿ ರಕ್ಷಣೆಯ ಹೋರಾಟಕ್ಕೆ ಸಜ್ಜಾಗಿದೆ.
Police Raid: ಮಧ್ಯರಾತ್ರಿ 30ಕ್ಕೂ ಹೆಚ್ಚು ರೌಡಿಗಳ ಅಡ್ಡಾಗಳಿಗೆ ನುಗ್ಗಿದ ಖಾಕಿ ಪಡೆ; ಲಾಂಗ್, ಮಚ್ಚು ಜಪ್ತಿ!