newsics.com | ನ್ಯೂಸಿಕ್ಸ್
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಯುವತಿ ಉಗಾಂಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು 22 ವರ್ಷದ ಬಿಂದು ಎಚ್. ಅಜ್ಜೋಳ ಎಂದು ಗುರುತಿಸಲಾಗಿದೆ.
ಮೃತ ಬಿಂದು ಮತ್ತು ಆಕೆಯ ಪತಿ ಚಂದ್ರಶೇಖರ್ ಪರಸ್ಪರ ಪ್ರೀತಿಸಿ 2025ರ ಜೂನ್ ಏಳರಂದು ವಿವಾಹವಾಗಿದ್ದರು. ಮದುವೆಯಾದ ಬಳಿಕ ಉಗಾಂಡದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ದಂಪತಿ, ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ವಿದೇಶಕ್ಕೆ ತೆರಳಿದ್ದರು. ಹೊಸ ಬದುಕಿನ ಹತ್ತಾರು ಕನಸುಗಳನ್ನು ಹೊತ್ತು ಸಪ್ತಸಾಗರ ದಾಟಿದ್ದ ಬಿಂದು, ಉಗಾಂಡದ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಯುವತಿಯು ಕನ್ನನಾಯಕನಕಟ್ಟೆ ಗ್ರಾಮದ ದಿವಂಗತ ಎ. ಹಾಲಪ್ಪ ಮತ್ತು ಮಂಜುಳಾ ದಂಪತಿಯ ಏಕೈಕ ಪುತ್ರಿಯಾಗಿದ್ದರು. ವಿದೇಶದಲ್ಲಿದ್ದರೂ ಪ್ರತಿದಿನ ಭಾರತದಲ್ಲಿದ್ದ ತನ್ನ ತಾಯಿಯೊಂದಿಗೆ ಫೋನ್ನಲ್ಲಿ ಮಾತನಾಡಿ ಕ್ಷೇಮ ವಿಚಾರಿಸುತ್ತಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಈ ಘಟನೆ ನಡೆದ ದಿನದಂದು ಬಿಂದು ಮಧ್ಯಾಹ್ನದ ಅಡುಗೆ ಮಾಡಿ ಊಟಕ್ಕೆ ಬರುವಂತೆ ಪತಿ ಚಂದ್ರಶೇಖರ್ ಅವರಿಗೆ ಫೋನ್ ಮಾಡಿ ಕರೆದಿದ್ದರು. ಆದರೆ ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಬಿಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಏಕೈಕ ಮಗಳ ಸಾವಿನ ಸುದ್ದಿ ಕೇಳಿ ತಾಯಿ ಮಂಜುಳಾ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ನೆರವಿಗೆ ಧಾವಿಸಿದ ಸಿರಿಗೆರೆ ಶ್ರೀಗಳು
ವಿಷಯ ತಿಳಿಯುತ್ತಿದ್ದಂತೆ, ಜರ್ಮನಿ ಪ್ರವಾಸದಲ್ಲಿದ್ದ ಸಿರಿಗೆರೆ ತರಳಬಾಳು ಪೀಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ. ಮೃತದೇಹವನ್ನು ತಾಯ್ನಾಡಿಗೆ ತರಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಉಗಾಂಡದ ಕಂಪಾಲ ನಗರದಲ್ಲಿ ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ರಾಯಭಾರಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಜುಲೈ 1ರಂದು ರಾತ್ರಿ ಎಮಿರೇಟ್ಸ್ ವಿಮಾನದಲ್ಲಿ ದುಬೈ ಮಾರ್ಗವಾಗಿ ಹೊರಟ ಬಿಂದು ಅವರ ಪಾರ್ಥಿವ ಶರೀರವು ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಅಲ್ಲಿಂದ ಮೃತದೇಹವನ್ನು ಕನ್ನನಾಯಕನಕಟ್ಟೆ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
Blood Falls ಅಂಟಾರ್ಟಿಕಾದಲ್ಲಿ ಹರಿಯುವ ಕೆಂಪು ನೀರು ನಿಜಕ್ಕೂ ರಕ್ತನಾ? ಬಯಲಾಯ್ತು ಶತಮಾನದ ರಹಸ್ಯ! ವಿಡಿಯೋ ನೋಡಿ