newsics.com| ನ್ಯೂಸಿಕ್ಸ್
ರಾಜ್ಯದಲ್ಲಿ ಸುಮಾರು ಮೂರು ವರ್ಷಗಳ ಬಳಿಕ ಅಧಿಕಾರ ಹಸ್ತಾಂತರ ಆಗಿದೆ. ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರೊಂದಿಗೆ 13 ಜನ ಹಿರಿಯ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದೀಗ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿದ್ದು, ಇದಕ್ಕಾಗಿ ಹರಸಾಹಸ ಮಾಡಿ ಪಟ್ಟಿಯೊಂದನ್ನು ಸಿದ್ದಪಡಿಸಿರುವ ಸಿಎಂ ಡಿಕೆ ಶಿವಕುಮಾರ್, ನಾಳೆ (ಜುಲೈ2) ರಂದು ನವದೆಹಲಿಗೆ ತೆರಳಲಿದ್ದಾರೆ. ಈ ಪಟ್ಟಿಯನ್ನು ವರಿಷ್ಠ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.
ಒಂದು ವೇಳೆ ಅವರು ಸಿದ್ದಪಡಿಸಿರುವ ಪಟ್ಟಿಯನ್ನು ವರಿಷ್ಠರು ಒಪ್ಪಿದ್ದೇ ಆದ್ದಲ್ಲಿ ಜುಲೈ 8 ರಂದು ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಪಟ್ಟಿಯಲ್ಲಿ ಹಿರಿಯರನ್ನು ಕೈಬಿಟ್ಟು ಬಹುತೇಕ 50ರ ಆಸುಪಾಸಿನ ಕ್ರೀಯಾಶೀಲ ಮತ್ತು ಉತ್ಸಾಹಿ ಯುವಕರ ಪಡೆ ಸಂಪುಟ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ.
ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಪಟ್ಟಿಯೊಂದಿಗೆ ನವದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಹೆಸರುಗಳು ಸೇರುವ ಸಾಧ್ಯತೆಗಳು ಹೆಚ್ಚಾಗಿವೆ. ಇಬ್ಬರೂ ನಾಯಕರ ಸಮನ್ವಯದ ಶಾಸಕರು ಈ ಪಟ್ಟಿಯಲ್ಲಿ ಸೇರುವ ಸಾಧ್ಯತೆಗಳಿವೆ.
ಜುಲೈ 20 ರಂದು ವಿಧಾನ ಮಂಡಲದ ಅಧಿವೇಶನ:
ಜುಲೈ 20 ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗುವ ನಿರೀಕ್ಷೆ ಇದ್ದು, ಅದಕ್ಕೂ ಮುನ್ನ ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಡಿಕೆ ಶಿವಕುಮಾರ್ ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಸಿಎಂ ಅವರು ಜುಲೈ 8ರೊಳಗೆ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಜುಲೈ 2 ರಂದು ವಿದೇಶ ಪ್ರವಾಸದಿಂದ ಹಿಂದಿರುಗಲಿದ್ದಾರೆ. ಅದೇ ದಿನ ನವದೆಹಲಿಗೆ ತೆರಳಲಿರುವ ಸಿಎಂ, ಅಲ್ಲಿ ವಾಸ್ತವ್ಯ ಹೂಡಿ ಸಂಭಾವ್ಯ ಪಟ್ಟಿಗೆ ಅನುಮೋದನೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ರಾಹುಲ್ ಗಾಂಧಿ ಅವರ ಇಚ್ಚೆಯಂತೆ ಯುವಕರಿಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದೀಗ ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಇದ್ದು, ಇದರಲ್ಲಿ ಎರಡು ಸ್ಥಾನಗಳನ್ನು ಖಾಲಿ ಇರಿಸಿ, ಉಳಿದ 18 ಸ್ಥಾನಗಳಿಗೆ ಸಚಿವರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ಹಿರಿಯ ಸಚಿವರು ಸಂಪುಟದಲ್ಲಿರುವುದರಿಂದ ಕಿರಿಯರಿಗೆ ಈ ಬಾರಿ ಡಿಕೆ ಶಿವಕುಮಾರ್ ಹೆಚ್ಚಿನ ಅವಕಾಶ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ಸಿದ್ದಪಡಿಸಿದ್ದಾರೆ ಎಂದು ಅಪ್ತ ವಲಯ ತಿಳಿಸಿವೆ.
ಮೊದಲ ಸುತ್ತಿನಲ್ಲಿ ಅವಕಾಶ ವಂಚಿತ ಶಾಸಕರು:
ಈಗಾಗಲೇ ಮೊದಲ ಸುತ್ತಿನ ಸಚಿವ ಸಂಪುಟದಲ್ಲಿ ಹಿರಿಯ ಶಾಸಕರಾದ ಹೆಚ್ ಕೆ ಪಾಟೀಲ್, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್ ಸೇರಿದಂತೆ ಅನೇಕರಿಗೆ ಸ್ಥಾನ ಸಿಗಲಿಲ್ಲ. ಆದ್ದರಿಂದ ಈ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಮುಂದುವರೆಸಿದ್ದಾರೆ.
ಹೈಕಮಾಂಡ್ ಸಂದೇಶ:
ಇನ್ನೊಂದೆಡೆ ಸಚಿವ ಸಂಪುಟದಲ್ಲಿ ಹೇಗಾದರೂ ಮಾಡಿ ಸೇರಬೇಕೆಂಬ ಹುಮ್ಮಸ್ಸಿನಲ್ಲಿರುವ ಅನೇಕ ಶಾಸಕರು ದೆಹಲಿಯಾತ್ರೆ ಕೈಗೊಂಡಿದ್ದರು. ಈ ಯಾತ್ರೆಗೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುವ ಉದ್ದೇಶದಿಂದ ಯಾರೊಬ್ಬ ಶಾಸಕರು ನವದೆಹಲಿಗೆ ಬರುವುದು ಬೇಡ ಎಂಬ ಕಟ್ಟುನಿಟ್ಟಿನ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಇದರಲ್ಲಿ ಯಾರ ಹೆಸರು ಸೇರ್ಪಡೆಯಾಗಲಿದೆಯಾ ಅಥವಾ ಡಿಲೀಟ್ ಆಗಲಿದೆಯಾ ಕಾದುನೋಡಬೇಕಾಗಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಲ್ಲಿ ಸಾಕಷ್ಟು ಶಾಸಕರು ತೆರಳಿ ಸಭೆ ನಡೆಸಿದ್ದಾರೆ.
ಪ್ರದೀಪ್ ಈಶ್ವರ್, ಸಂತೋಷ್ ಲಾಡ್ ಸೇರಿದಂತೆ ಅನೇಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮತ್ತೆ ಇಬ್ಬರೂ ನಾಯಕರು ಯಾರನ್ನು ಸಚಿವ ಸ್ಥಾನದ ಪಟ್ಟಿಗೆ ಆಯ್ಕೆ ಮಾಡಲಿದ್ದಾರೆ ಎನ್ನುವುದು ಮಾತ್ರ ರಹಸ್ಯವಾಗಿದೆ.