newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನದ ಕಿಡಿ ಈಗ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅಡ್ಡ ಮತದಾನದ ಕಂಪ್ಲೀಟ್ ರಿಪೋರ್ಟ್ ನೀಡಲು ದಿಢೀರನೆ ದೆಹಲಿಗೆ ಹಾರಿದ್ದ ರಾಜ್ಯ ಬಿಜೆಪಿ ನಾಯಕರು ವರಿಷ್ಠರ ಸಭೆ ಮುಗಿಸಿ ಸಿಲಿಕಾನ್ ಸಿಟಿಗೆ ವಾಪಸಾಗಿದ್ದಾರೆ.
ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಒಬ್ಬರೇ ಹೈಕಮಾಂಡ್ ಜೊತೆ ಹೆಚ್ಚಿನ ಚರ್ಚೆಗಾಗಿ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಸಮ್ಮುಖದಲ್ಲೇ ನಡೆದ 45 ನಿಮಿಷಗಳ ಹೈವೋಲ್ಟೇಜ್ ಸಭೆಯಲ್ಲಿ, ವರಿಷ್ಠರು ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ
ರಾಜ್ಯ ನಾಯಕರಿಗೆ ಹೈಕಮಾಂಡ್ ಹಾಕಿದ ಆ 11 ಕಠಿಣ ಪ್ರಶ್ನೆಗಳು
ಚುನಾವಣೆ ಘೋಷಣೆಯಾದ ದಿನದಿಂದ ಮತದಾನದ ದಿನದವರೆಗೆ ರಾಜ್ಯ ನಾಯಕರು ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ವರಿಷ್ಠರು ಒಂದರ ಮೇಲೊಂದರಂತೆ ಬರೋಬ್ಬರಿ 11 ಪ್ರಶ್ನೆಗಳನ್ನು ಕೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ:
ಚುನಾವಣೆ ಘೋಷಣೆಯಾದ ಬಳಿಕ ನೀವು ಒಟ್ಟು ಎಷ್ಟು ಸಭೆಗಳನ್ನು ನಡೆಸಿದ್ದೀರಿ?
ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯನ್ನು ಯಾವಾಗ ಮಾಡಿದ್ದೀರಿ?
ನಮ್ಮ ಶಾಸಕರ ಮತಗಳ ಹಂಚಿಕೆಯನ್ನು ಯಾವ ರೀತಿ ಪ್ಲಾನ್ ಮಾಡಿದ್ದೀರಿ?
ಶಾಸಕರಿಗೆ ಕಟ್ಟುನಿಟ್ಟಿನ ವಿಪ್ ಅನ್ನು ಯಾವಾಗ ಜಾರಿ ಮಾಡಿದ್ದೀರಿ?
ಅಡ್ಡ ಮತದಾನ ತಡೆಯಲು ನಿಮ್ಮ ಸಿದ್ಧತೆ ಯಾವ ರೀತಿ ಇತ್ತು?
ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿಯಿಂದ ಈಗ ನಮಗೆ ಏನು ಮಾಹಿತಿ ಸಿಗಲಿದೆ?
ಕೊನೆ ಕ್ಷಣದ ಬದಲು, ಶಾಸಕಾಂಗ ಪಕ್ಷದ ಸಭೆಯನ್ನು 2-3 ದಿನ ಮುಂಚಿತವಾಗಿಯೇ ಮಾಡಬಹುದಿತ್ತಲ್ವಾ?
ಮೈತ್ರಿ ಪಕ್ಷ ಜೆಡಿಎಸ್ (JDS) ಜೊತೆ ನೀವು ಎಷ್ಟು ಸಭೆಗಳನ್ನು ಮಾಡಿದ್ದೀರಿ?
ಜೆಡಿಎಸ್ ಅಭ್ಯರ್ಥಿಗೆ ಹಾಕುವ ಬಿಜೆಪಿ ಮತಗಳ ಬಗ್ಗೆ ಅವರಿಗೆ ಮೊದಲೇ ಕಂಪ್ಲೀಟ್ ಮಾಹಿತಿ ಕೊಟ್ಟಿದ್ದೀರಾ?
ಮೊದಲೇ ಅನುಮಾನ ಇದ್ದ ಶಾಸಕರ ಜೊತೆ ನೀವು ಮತ್ತೊಮ್ಮೆ ಮಾತುಕತೆ ನಡೆಸಿ ಇಲ್ವಾ?
ನಿಮ್ಮ ಇಷ್ಟೂ ಪ್ಲಾನಿಂಗ್ನಲ್ಲಿ ಲೋಪವಾಗಿದ್ದೆಲ್ಲಿ?
ವರಿಷ್ಠರ ಮುಂದೆ ರಾಜ್ಯ ನಾಯಕರು ಕೊಟ್ಟ ಭರ್ಜರಿ ಕೌಂಟರ್ ವಿವರಣೆ
ವರಿಷ್ಠರ ಈ ತೀಕ್ಷ್ಣ ಪ್ರಶ್ನಾವಳಿಗಳಿಗೆ ಉತ್ತರಿಸಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೂಡಲು ಕೊನೆ ಕ್ಷಣದವರೆಗೆ ಕಾಯಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ:
ಹಣದ ಆಮಿಷಕ್ಕೆ ಬಲಿಯಾಗಿದ್ದಾರೆ: “ಕಾಂಗ್ರೆಸ್ ನಾಯಕರು ಭಾರಿ ಪ್ರಮಾಣದ ಹಣದ ಆಮಿಷ ಒಡ್ಡಿ ನಮ್ಮ ಶಾಸಕರಿಂದ ಅಡ್ಡ ಮತದಾನ ಮಾಡಿಸಿದ್ದಾರೆ. ಹಣ ಪಡೆದೇ ನಮ್ಮವರು ವಿಪ್ ಉಲ್ಲಂಘಿಸಿದ್ದಾರೆ” ಎಂದು ರಾಜ್ಯ ನಾಯಕರು ವರಿಷ್ಠರಿಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಕೊನೆ ಕ್ಷಣದಲ್ಲಿ ವಿಪ್ ಯಾಕೆ?: “ನಮ್ಮ ತಂತ್ರಗಾರಿಕೆ ಮತ್ತು ಮತಗಳ ಹಂಚಿಕೆಯ ಪ್ಲಾನ್ ಕಾಂಗ್ರೆಸ್ ಪಾಳಯಕ್ಕೆ ಮೊದಲೇ ತಿಳಿಯಬಾರದು ಎಂಬ ಏಕೈಕ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ವಿಪ್ ನೀಡಲಾಗಿತ್ತು. ಪ್ರತಿಯೊಬ್ಬ ಶಾಸಕರ ಜೊತೆ ವೈಯಕ್ತಿಕವಾಗಿ ಮಾತನಾಡಲಾಗಿತ್ತು” ಎಂದು ವಿವರಿಸಿದ್ದಾರೆ.
ಹೆಚ್ಚಿನ ಸಮಯಕ್ಕೆ ಬೇಡಿಕೆ: ಇಡೀ ಎಪಿಸೋಡ್ನ ಇಂಚಿಂಚು ಖಚಿತ ಮಾಹಿತಿಯೊಂದಿಗೆ ಪಕ್ಕಾ ರಿಪೋರ್ಟ್ ಸಲ್ಲಿಸಲು ನಮಗೆ ಇನ್ನು ಸ್ವಲ್ಪ ಕಾಲಾವಕಾಶ ಬೇಕು ಎಂದು ಹೈಕಮಾಂಡ್ ಬಳಿ ಕೇಳಿದ್ದಾರೆ.
ಹೈಕಮಾಂಡ್ ನೀಡಿದ ಖಡಕ್ ಇನ್ಸ್ಟ್ರಕ್ಷನ್ ಏನು?
ರಾಜ್ಯ ನಾಯಕರ ವಿವರಣೆ ಆಲಿಸಿದ ವರಿಷ್ಠರು ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ:
“ಸಿ.ಟಿ. ರವಿ ಸಮಿತಿ ವರದಿಯನ್ನು ಶೀಘ್ರವಾಗಿ ದೆಹಲಿಗೆ ಕಳುಹಿಸಿಕೊಡಿ.”
“ಅಶೋಕ್ ಮತ್ತು ವಿಜಯೇಂದ್ರ ಅವರು ಈ ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿನ ತಯಾರಿ ಮಾಡಿಕೊಳ್ಳಬೇಕಿತ್ತು (ನಿಮ್ಮ ಕಡೆಯಿಂದಲೂ ಲೋಪವಾಗಿದೆ).”
“ನಾವು ನಮ್ಮದೇ ಆದ ಗುಪ್ತಚರ ಮೂಲಗಳಿಂದಲೂ ಕಂಪ್ಲೀಟ್ ಮಾಹಿತಿ ಸಂಗ್ರಹಿಸುತ್ತಿದ್ದೇವೆ, ಸೂಕ್ತ ಸಮಯ ನೋಡಿ ದ್ರೋಹ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.”
“ಅಗತ್ಯ ಬಿದ್ದರೆ ಇಡೀ ತಂಡವನ್ನು ಮತ್ತೊಮ್ಮೆ ತುರ್ತಾಗಿ ದೆಹಲಿಗೆ ಕರೆಯಿಸಿಕೊಳ್ಳುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆನ್ನಲಾಗಿದೆ.
Wedding conspiracy ಮದುವೆ ಸಂಭ್ರಮದಲ್ಲಿದ್ದವರಿಗೆ ಸೂತಕ! ಎರಡನೇ ಯತ್ನದಲ್ಲಿ ಸಂಚು ಯಶಸ್ಸು, ಭಾವೀ ಪತ್ನಿ ಸಿಯಾ ಬಂಧನ
MLA Birthday ಶಾಸಕರ ಹುಟ್ಟುಹಬ್ಬದಲ್ಲಿ ಬಾಡೂಟ, ಫ್ರೀ ಸೀರೆಗಾಗಿ ಮುಗಿಬಿದ್ದ ಜನ: ಐವರಿಗೆ ಗಾಯ