newsics.com/ನ್ಯೂಸಿಕ್ಸ್
ವೀಕೆಂಡ್ ಗೆ ತನ್ನ ಪತಿಯ ಜೊತೆ ತಿರುಗಾಡಲು ಹೋಗಿದ್ದ ಗುರುಗ್ರಾಮದ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮಸ್ಸೂರಿಯಲ್ಲಿರುವ ಹೋಂಸ್ಟೇಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮೃತಳನ್ನು ದೆಹಲಿಯ ಕಿದ್ವಾಯಿ ನಗರ ನಿವಾಸಿ ಪಿ.ರಾಧಾ ಗಾಯತ್ರಿ(27) ಎಂದು ಗುರುತಿಸಲಾಗಿದೆ.
ಹೋಂಸ್ಟೇಯ ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು. ಪೊಲೀಸರು ಪ್ರಸ್ತುತ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಾಧಾ ಗಾಯತ್ರಿ ಮತ್ತು ಅವರ ಪತಿ ಸೌಮ್ಯ ಶ್ರೀಚರಣ್ ಜೂನ್ 13 ರಂದು ದೆಹಲಿಯಿಂದ ಉತ್ತರಾಖಂಡಕ್ಕೆ ಬಂದಿದ್ದರು. ಇವರಿಬ್ಬರಿಗೂ 2025ರ ನವೆಂಬರ್ 8 ರಂದು ವಿವಾಹವಾಗಿತ್ತು. ಮೊದಲು ರಿಷಿಕೇಶಕ್ಕೆ ಭೇಟಿ ನೀಡಿದ್ದ ದಂಪತಿ, ಜೂನ್ 14 ರ ರಾತ್ರಿ ತಿಪ್ರಿಧಾರ್ ಪ್ರದೇಶದಲ್ಲಿರುವ ಹೋಂಸ್ಟೇಯೊಂದಕ್ಕೆ ಆಗಮಿಸಿ, ರಾತ್ರಿ 11:30 ರ ಸುಮಾರಿಗೆ ‘ಬ್ಲಿಸ್’ ಹೆಸರಿನ ಕೊಠಡಿಗೆ ಚೆಕ್-ಇನ್ ಆಗಿದ್ದರು.
ಪತಿ ನೀಡಿದ ಹೇಳಿಕೆ:
ಪ್ರಾಥಮಿಕ ವಿಚಾರಣೆ ವೇಳೆ ಪತಿ ಶ್ರೀಚರಣ್ ಪೊಲೀಸರಿಗೆ ಮಾಹಿತಿ ನೀಡಿ, “ರಾತ್ರಿ ನಾವಿಬ್ಬರೂ ಒಟ್ಟಿಗೆ ಮದ್ಯ ಸೇವಿಸಿ ಮುಂಜಾನೆ 3:30 ರ ಸುಮಾರಿಗೆ ಮಲಗಿದ್ದೆವು. ಕೆಲವು ಗಂಟೆಗಳ ನಂತರ ಎಚ್ಚರಗೊಂಡು ನೋಡಿದಾಗ ಗಾಯತ್ರಿ ಕೊಠಡಿಯ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯ ಬಾಯಿ ಮತ್ತು ಮೂಗಿನಿಂದ ರಕ್ತ ಬರುತ್ತಿತ್ತು”. ತಕ್ಷಣವೇ ಹೋಂಸ್ಟೇ ಸಿಬ್ಬಂದಿಗೆ ಹಾಗೂ 108 ಆಂಬ್ಯುಲೆನ್ಸ್ಗೆ ಮಾಹಿತಿ ನೀಡಿದ್ದು, ವೈದ್ಯಕೀಯ ತಂಡ ಬರುವಷ್ಟರಲ್ಲೇ ಗಾಯತ್ರಿ ಕೊನೆಯುಸಿರೆಳೆದಿದ್ದಳು ಎಂದು ಹೇಳಿದ್ದಾನೆ.
ಕೊಠಡಿಯಲ್ಲಿ ರಕ್ತದ ಕಲೆಗಳು ಪತ್ತೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಕೊಠಡಿಯ ಬೆಡ್ಶೀಟ್ ಹಾಗೂ ನೆಲದ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಅಲ್ಲದೆ ಎರಡು ಖಾಲಿ ಮದ್ಯದ ಬಾಟಲಿಗಳು ಮತ್ತು ಆಹಾರದ ಅವಶೇಷಗಳು ಪತ್ತೆಯಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಆದರೆ, ಕೊಠಡಿಯಲ್ಲಿ ಯಾವುದೇ ಗಲಾಟೆ ಅಥವಾ ಬಲವಂತದ ಲಕ್ಷಣಗಳು ಕಂಡುಬಂದಿವೆಯೇ ಎಂಬುದನ್ನು ಪೊಲೀಸರು ಇನ್ನು ಬಹಿರಂಗಪಡಿಸಿಲ್ಲ.
ಪ್ರಕರಣವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಆಸ್ಪತ್ರೆಯಲ್ಲಿ ವೈದ್ಯರ ಸಮಿತಿಯಿಂದ (Panel of doctors) ವಿಡಿಯೋ ಚಿತ್ರೀಕರಣದೊಂದಿಗೆ ಶವಪರೀಕ್ಷೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ. ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪತಿ ಶ್ರೀಚರಣ್ ಹಾಗೂ ಹೋಂಸ್ಟೇ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಷಯ ತಿಳಿದು ಮೃತಳ ಕುಟುಂಬಸ್ಥರು ವಿಶಾಖಪಟ್ಟಣದಿಂದ ಉತ್ತರಾಖಂಡಕ್ಕೆ ಧಾವಿಸುತ್ತಿದ್ದು, ಇನ್ನು ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ‘ಬ್ಲಿಸ್’ ಕೊಠಡಿಯಲ್ಲಿ ಆ ರಾತ್ರಿ ನಡೆದಿದ್ದೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.