newsics.com/ನ್ಯೂಸಿಕ್ಸ್
ದ್ರಾವಿಡ ನಾಡಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ದಳಪತಿ ವಿಜಯ್ ಸಿಎಂ ಆದ ಬೆನ್ನಲ್ಲೇ, ಇದೀಗ ಮಾಜಿ ಸಿಎಂ ಜಯಲಲಿತಾ ಅವರ ಮಾರ್ಗದರ್ಶಕರು ಎನ್ನಲಾಗುವ ಪ್ರಸಿದ್ದ ಜ್ಯೋತಿಷಿ ತಿರು ರಿಕಿ ರಾಧನ್ ಪಂಡಿತ್ ಅವರಿಗೆ ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಸ್ಥಾನವನ್ನು ನೀಡಲಾಗಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಸಿಎಂ ವಿಜಯ್ ಅವರ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಕಚೇರಿಗೆ (OSD) ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಯಾರು ಈ ರಾಧನ್ ಪಂಡಿತ್?
ತಮಿಳುನಾಡು ಸರ್ಕಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಕಚೇರಿಗೆ (OSD) ನೇಮಿಸಲಾಗಿರುವ ರಾಧನ್ ಪಂಡಿತ್ ವೆಟ್ರಿವೇಲ್ ತಮಿಳುನಾಡಿನ ಪ್ರಮುಖ ಆಧ್ಯಾತ್ಮಿಕ ಮಾರ್ಗದರ್ಶಕರು. ಕಳೆದ 40 ವರ್ಷಗಳಿಂದ ಜ್ಯೋತಿಷ್ಯವನ್ನು ಅಭ್ಯಾಸ ಮಾಡುತ್ತಿರುವ ರಾಧನ್ ಪಂಡಿತ್ ವೆಟ್ರಿವೇಲ್, ಸಾಮಾಜಿಕ ಮಾಧ್ಯಮ ಮೂಲಕ ಜನರಿಗೆ ಜ್ಯೋತಿಷ್ಯ ಸಲಹೆಯನ್ನು ನೀಡುತ್ತಾರೆ. ಜ್ಯೋತಿಷ್ಯದ ಜೊತೆಗೆ ತಮಿಳುನಾಡು ರಾಜಕೀಯದಲ್ಲೂ ಸಕ್ರಿಯರಾಗಿರುವ ರಾಧನ್ ಪಂಡಿತ್ ವೆಟ್ರಿವೇಲ್ ಸಾಮಾನ್ಯವಾಗಿ ರಾಧನ್ ಪಂಡಿತ್ ಎಂತಲೇ ಪ್ರಸಿದ್ದರು.
ವಿಶೇಷವೆಂದರೆ, ರಾಧನ್ ಪಂಡಿತ್, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಧ್ಯಾತ್ಮಿಕ ಮಾರ್ಗದರ್ಶಕರೂ ಆಗಿದ್ದರು. ತಮಿಳುನಾಡು ರಾಜಕೀಯದಲ್ಲಿ ರಾಧನ್ ಪಂಡಿತ್ ಅವರ ಬಗ್ಗೆ ಅಪಾರ ಗೌರವವಿದೆ. ಜಯಲಲಿತ, ವಿಜಯ್ ಅಷ್ಟೇ ಅಲ್ಲದೆ, ರಾಜ್ಯದ ಹಲವು ಗಣ್ಯಾತಿಗಣ್ಯರು ಇವರ ಸಲಹೆಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ರಾಧನ್ ಪಂಡಿತ್ ಸಲಹೆ ಪಡೆದೇ ನಿರ್ಧಾರ ಕೈಗೊಳ್ಳುತ್ತಿದ್ದ ಜಯಲಲಿತಾ!
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಮೂಲಗಳಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಯಾವಾಗಲೂ ರಾಧನ್ ಪಂಡಿತ್ ಅವರೊಂದಿಗೆ ಸಮಾಲೋಚಿಸಿದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರಂತೆ.
ಚುನಾವಣೆಗೂ ಮೊದಲೇ ದಳಪತಿ ದರ್ಬಾರ್ ಬಗ್ಗೆ ಭವಿಷ್ಯ ನುಡಿದಿದ್ದ ರಾಧನ್ ಪಂಡಿತ್ ವೆಟ್ರಿವೇಲ್!
ಗಮನಾರ್ಹವಾಗಿ, ವಿಧಾನಸಭಾ ಚುನಾವಣೆಗೂ ಮೊದಲೇ ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ಅವರ ಪಕ್ಷ ಟಿವಿಕೆ ಗೆಲುವು ನಿಶ್ಚಿತ ಎಂದು ರಾಧನ್ ಪಂಡಿತ್ ವೆಟ್ರಿವೇಲ್ ಭವಿಷ್ಯ ನುಡಿದಿದ್ದರು. ಟಿವಿಕೆ ಗೆದ್ದಾಗ, ರಾಧನ್ ಪಂಡಿತ್ ನೇರವಾಗಿ ವಿಜಯ್ ಅವರ ಮನೆಗೆ ಹೋಗಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದರು.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದು ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಜಯ ಸಾಧಿಸಿತು. ವಿಜಯ್ ಅವರ ಟಿವಿಕೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಸರ್ಕಾರ ರಚಿಸಲು ಅಗತ್ಯವಾದ ʼಮ್ಯಾಜಿಕ್ʼ ನಂಬರ್ ಸಿಗದ ಕಾರಣ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಎಂ ಪಕ್ಷಗಳ ಮೈತ್ರಿಕೂಟದ ನೆರವಿನೊಂದಿಗೆ ದಳಪತಿ ವಿಜಯ್ ಸರ್ಕಾರ ರಚಿಸಿದ್ದಾರೆ.
ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆ ಕೇಸ್; ಎಫ್ಎಸ್ಎಲ್ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ