newsics.com/ನ್ಯೂಸಿಕ್ಸ್
ತಮಿಳುನಾಡಿನ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. 234 ಸಂಖ್ಯಾ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತ್ವತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. ಆದರೆ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಸಂಖ್ಯಾಬಲದ ಕೊರತೆ ಎದುರಿಸುತ್ತಿರು ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದೆ.
ಹೀಗಿದ್ದರೂ ಸರ್ಕಾರ ರಚಿಸಲು ಬೇಕಾದ ಅಗತ್ಯ ಸಂಖ್ಯಾಬಲ ವಿಜಯ್ ಇಲ್ಲ. ಹೀಗಾಗಿ 24 ಗಂಟೆಯಲ್ಲಿ ಎರಡು ಬಾರಿ ರಾಜ್ಯಪಾಲರನ್ನು ವಿಜಯ್ ಭೇಟಿ ಮಾಡಿದರೂ ಸರ್ಕಾರ ರಚನೆಗೆ ಅವಕಾಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಮುಂದೇನು? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಸದ್ಯದ ಸಂಖ್ಯಾ ಬಲ ಎಷ್ಟು?
ಟಿವಿಕೆ 108 ಸದಸ್ಯ ಬದಲ ಹೊಂದಿದರೆ ಡಿಎಂಕೆ 59 ಶಾಸಕರ ಬಲ ಹೊಂದಿದೆ. ಅದೇ ರೀತಿಯಲ್ಲಿ ಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ಐಎಂಯುಎಲ್ – 2, ಸಿಪಿಐ 2, ವಿಸಿಕೆ – 2, ಸಿಪಿಎಂ- 2 ಸ್ಥಾನಗಳನ್ನು ಹೊಂದಿದೆ. ವಿಜಯ್ಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ ಸೂಚಿಸಿದೆ. ಸಿಪಿಐ ಹಾಗೂ ಸಿಪಿಎಂ ಬೆಂಬಲ ನೀಡುವ ಸಾಧ್ಯತೆ ಇದೆ. ಸಮಾನ ಮನಸ್ಕರ ಬೆಂಬಲವನ್ನು ಗಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಆದರೆ, 108 ಸ್ಥಾನಗಳನ್ನು ಗಳಿಸಿರುವ ವಿಜಯ್ ಗೆ 11 ಶಾಸಕರ ಕೊರತೆ ಇದೆ. ಕಾಂಗ್ರೆಸ್ 5 ಶಾಸಕರ ಬೆಂಬಲ ಸಿಕ್ಕರೂ 6 ಸಂಖ್ಯೆಯ ಕೊರತೆ ಇದೆ. ಹೀಗಾಗಿ ಎಡ ಪಕ್ಷಗಳು ಹಾಗೂ ಇತರರ ಬೆಂಬಲ ಅತ್ಯಗತ್ಯ. ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳು ಶುಕ್ರವಾರ ಮಹತ್ವದ ಸಭೆ ನಡೆಸಲಿದೆ. ಉನ್ನತ ಮಟ್ಟದ ಸಭೆಯಲ್ಲಿ ಟಿವಿಕೆಗೆ ಬೆಂಬಲ ನೀಡುವ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯಪಾಲರ ನಿಲುವೇನು?
ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚನೆ ಮಾಡುವಷ್ಟು ಬಹುಮತ ಇಲ್ಲ. ಅಗತ್ಯ ಸಂಖ್ಯೆಯ ಕೊರತೆ ಇರುವ ಕಾರಣಕ್ಕಾಗಿ ಪ್ರಮಾಣ ವಚನಕ್ಕೆ ಅವಕಾಶ ನೀಡಲಾಗದು ಎಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸ್ಪಷ್ಡಪಡಿಸಿದ್ದಾರೆ. 188 ಶಾಸಕರ ಅಗತ್ಯ ಬಲ ಹೊಂದಿದರೆ ಮಾತ್ರ ವಿಜಯ್ಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಿಪಿಐ,ಸಿಪಿಎಂ ಮತ್ತು ಪಟ್ಟಾಳಿ ಮಕ್ಕಳ್ ಕಚ್ಚಿ( ಪಿಎಂಕೆ) ನಡೆ ಮಹತ್ವದ್ದಾಗಿದೆ.
ರಾಜಕೀಯ ಇತಿಹಾಸದಲ್ಲಿ ಇಂತಹ ಬಿಕ್ಕಟ್ಟು ಸೃಷ್ಟಿಯಾಗಿತ್ತೇ?
ತಮಿಳುನಾಡಿನಲ್ಲಿ ‘ಲಿಂಗಲ್ ಲಾರ್ಜೆಸ್ಟ್’ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದರೂ ಸರ್ಕಾರ ರಚಿಸಲು ಸಂಖ್ಯಾ ಬಲದ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದೆ. ಆದರೆ ದೇಶದ ರಾಜಕೀಯ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತಾ ಎಂಬುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
1994 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಈ ಸಂಬಂಧಿಸಿದಂತೆ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗಿತ್ತು. ಸದನದಲ್ಲಿ ಬಹುಮತ ಸಾಬೀತು ಮಾಡಲು ಎಸ್ ಆರ್ ಬೊಮ್ಮಾಯಿ ಅವಕಾಶ ಕೋರಿದ್ದರೂ ಅಂದಿನ ರಾಜ್ಯಪಾಲರು ಅವಕಾಶ ನೀಡಿರಲಿಲ್ಲ. ಅಲ್ಲದೆ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿದ್ದರು.
ಇದು ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ಎಸ್ ಆರ್ ಬೊಮ್ಮಾಯಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು. “ಒಂದು ಸರ್ಕಾರಕ್ಕೆ ಬಹುಮತ ಇದೆಯೇ ಅಥವಾ ಇಲ್ಲವೇ ಎಂಬುವುದು ವಿಧಾನಸಭೆಯಲ್ಲಿ ನಿರ್ಧಾರವಾಗಬೇಕೇ ಹೊರತು, ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯದ ಮೇಲಲ್ಲ’ ಎಂದು ಸ್ಪಷ್ಟಪಡಿಸಿತ್ತು. ಈ ಮೂಲಕ ರಾಜ್ಯ ಸರ್ಕಾರದ ಮೇಲೆ ಕೇಂದ್ರದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿತ್ತು.
ಇದೀಗ ತಮಿಳುನಾಡಿನಲ್ಲಿ ವಿಜಯ್ ಬಹುಮತ ಸಾಬೀತು ಮಾಡಬೇಕಾಗಿರುವುದು ರಾಜ್ಯಪಾಲರ ಮುಂದೆಯೋ ಅಥವಾ ವಿಧಾನಸಭೆಯಲ್ಲೋ ಎಂಬ ಚರ್ಚೆಗಳು ಶುರುವಾಗಿದೆ. ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಖಂಡಿಸಿವೆ. ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಬಹುದೇ ಹೊರತಾಗಿ ಯಾರು ಬಹುಮತ ಹೊಂದಿದ್ದಾರೆ ಎಂಬುವುದನ್ನು ನಿರ್ಧರಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ರಾಜ್ಯಪಾಲರ ನಡೆಯನ್ನು ಖಂಡಿಸಿವೆ.
ಸಂವಿಧಾನ ಏನು ಹೇಳುತ್ತೆ?
ಬಹುಮತ ಇಲ್ಲದೆ ಇರುವ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬೇಕೇ ಎಂಬ ವಿಚಾರವಾಗಿ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖ ಇಲ್ಲ ಎಂಬ ಅಂಶವನ್ನು ಕಾನೂನು ತಜ್ಞರು ಹೇಳುತ್ತಾರೆ. ಸ್ಪಷ್ಟ ಬಹುಮತ ಇಲ್ಲದೆ ಇದ್ದರೂ ಅತಿದೊಡ್ಡ ಪಕ್ಷಕ್ಕೆ ಮೊದಲ ಸರ್ಕಾರ ರಚನೆಗೆ ಅವಕಾಶ ನೀಡಿರುವ ಅನೇಕ ಉದಾಹರಣೆಗಳು ಇವೆ.
ಯಾವ ಪ್ರಕರಣಗಳಲ್ಲಿ ಸಾಬೀತು
ಕರ್ನಾಟಕದಲ್ಲಿ 2018 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಒಟ್ಟು 104 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೂ ಸರ್ಕಾರ ರಚನೆ ಮಾಡುವಷ್ಟು ಅಂದರೆ 112 ಸದಸ್ಯರ ಸಂಖ್ಯಾ ಬಲ ಇರಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಜೊತೆಯಾಗಿ 116 ಶಾಸಕರ ಬಲ ಇತ್ತು. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚಿಸುವ ಕಸರತ್ತು ನಡೆಸುತ್ತಿದ್ದರು.
ಈ ನಡುವೆ ರಾಜ್ಯಪಾಲರು ಬಿಎಸ್ ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದರು. ಆದರೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಯಡಿಯೂರಪ್ಪ ವಿಫಲರಾದರು. ನಂತರದಲ್ಲಿ ವಿಧಾನಸಭೆಯಲ್ಲಿ ಭಾಷಣ ಮಾಡಿ ರಾಜೀನಾಮೆ ನೀಡಿದರು.
2017 ರಲ್ಲಿ ಗೋವಾದಲ್ಲೂ ಇಂತಹದೊಂದು ಬಿಕ್ಕಟ್ಟು ಎದುರಾಗಿತ್ತು. ಗೋವಾದಲ್ಲಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕೇವಲ 13 ಸ್ಥಾನಗಳನ್ನು ಗೆದ್ದ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಆಹ್ವಾನಿಸಿದ್ದರು. ಆದರೆ ಬಹುಮತಕ್ಕೆ 21 ಸ್ಥಾನಗಳ ಅಗತ್ಯ ಇತ್ತು. ರಾಜ್ಯಪಾಲರ ನಡೆಯಿಂದಾಗಿ ಮನೋಹರ್ ಪಾರಿಕ್ಕರ್ ಅವರು ಸಿಎಂ ಆದರು, ಬಳಿಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿದ್ದರು.
2019 ರಲ್ಲಿ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆದರೆ ದೇವೇಂದ್ರ ಫಡ್ನವೀಸ್ ಅವರಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಆಹ್ವಾನ ನೀಡಿದ್ದರು. ಆದರೆ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ವಿಫಲರಾಗಿದ್ದರು. ಬಳಿಕ ಶಿವಸೇನೆ, ಕಾಂಗ್ರೆಸ್, ಎನ್ ಸಿ ಪಿ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಮಣಿಪುರದಲ್ಲೂ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿಕೊಂಡು ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬಹುದು.
ಆದರೆ ಸುಪ್ರೀಂ ಕೋರ್ಟ್ ಹಲವು ಸಂದರ್ಭದಲ್ಲಿ ಬಹುಮತ ಸಾಬೀತು ಪಡಿಸುವುದು ವಿಧಾನಸಭೆಯಲ್ಲೇ ಹೊರತಾಗಿ ರಾಜಭವನದಲ್ಲಿ ಅಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ತಮಿಳುನಾಡಿನಲ್ಲಿ ಏನಾಗಲಿದೆ ಎಂಬುವುದು ಸದ್ಯಕ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವಿಜಯ್ ಸರ್ಕಾರ ರಚನೆ ಮಾಡಲು ತನ್ನ ಸಂಖ್ಯಾಬಲವನ್ನು ರಾಜ್ಯಪಾಲರಿಗೆ ತೋರಿಸಿದ ಬಳಿಕವೇ ಸರ್ಕಾರ ರಚನೆಗೆ ಅವಕಾಶ ನೀಡಲಾಗುತ್ತಾ? ಅಥವಾ ಅತಿ ದೊಡ್ಡ ಪಕ್ಷ ಎಂಬ ಕಾರಣಕ್ಕಾಗಿ ಸರ್ಕಾರ ರಚನೆಗೆ ಅವಕಾಶ ನೀಡಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಲಾಗುತ್ತಾ ಎಂಬುವುದು ಸದ್ಯದ ಕುತೂಹಲ. ಒಂದು ವೇಳೆ ವಿಜಯ್ ಬಹುಮತ ಸಾಬೀತು ಪಡಿಸಲುವಲ್ಲಿ ವಿಫಲವಾಗಿದ್ದನ್ನೇ ಮುಂದಿಟ್ಟುಂಡು ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಪ್ರಯತ್ನ ನಡೆಸಲಾಗುತ್ತಾ ಎಂಬುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ.